38 ವರ್ಷದ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಕಾಡಿಸುತ್ತಿರುವುದಕ್ಕೆ ಬೇಸತ್ತ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿಖಿಲ್ ಕುಮಾರ್ (19) ಮೃತ ಯುವಕ ಎಂದು ಗುರುತಿಸಲಾಗಿದೆ. ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಶಾರದಾ ಎಂಬಾಕೆ ನಿಖಿಲ್ ಜತೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಪೋಷಕರ ವಿರೋಧದ ನಡುವೆಯೂ ಶಾರದಾ ಯುವಕನನ್ನು ಬಿಟ್ಟಿರಲಿಲ್ಲ. ಪೋಷಕರ ಕಣ್ತಪ್ಪಿಸಿ ಆತನನ್ನು ಹೊರಗಡೆ ಕರೆದೊಯ್ಯುತಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಚೇದನ ನೀಡಿದ್ದ ಶಾರದಾ, ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ಮೃತ ನಿಖಿಲ್ ಪೋಷಕರು ಶಾರದಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


