ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್ ಒಳಗೆ ಬಿದ್ದು 11 ತಿಂಗಳ ಮಗು ಮೃತಪಟ್ಟಿದೆ. ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಯ ಪುತ್ರಿ ಖುಷಿ ಮೃತ ಪಟ್ಟ ದುರ್ದೈವಿ. ಮಗು ಆಟವಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಅಸು ನೀಗಿದೆ.
ಮನೆ ಒರೆಸುವ ಸಲುವಾಗಿ ಟಬ್ಗೆ ನೀರನ್ನು ತುಂಬಿಸಿ ಇಡಲಾಗಿತ್ತು, ಅಲ್ಲೇ ಮಗು ಆಟವಾಡಿಕೊಂಡಿತ್ತು. ಈ ವೇಳೆ ಮಗುವಿನ ತಂದೆ ಶಂಷಾದ್ ಕೆಲಸ ಮುಗಿಸುಕೊಂಡು ಮನೆಗೆ ಬಂದಿದ್ದಾರೆ. ತೀವ್ರ ಬಾಯಾರಿಕೆಯಿಂದ ಬಳಲಿದ್ದ ಕಾರಣ ಹೆಂಡತಿ ಮುಸ್ಕಾನ್ ಬಳಿ ಕುಡಿಯಲು ನೀರು ಕೇಳಿದ್ದಾರೆ. ಮುಸ್ಕಾನ್ ಪತಿಗಾಗಿ ನೀರು ತರಲು ಹೋಗಿ ಬರುವಷ್ಟರಲ್ಲಿ ಆಟವಾಡುತ್ತಿದ್ದ ಖುಷಿ ಟಬ್ ಒಳಗೆ ಬಿದ್ದಿದ್ದಾಳೆ.
ಟಬ್ಗೆ ಬಿದ್ದ ತಕ್ಷಣವೇ ಮಗುವಿಗೆ ಪ್ರಜ್ಞೆ ತಪ್ಪಿದೆ. ಭಯಗೊಂಡ ಪೋಷಕರು ಕೂಡಲೇ ಹತ್ತಿರದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಖುಷಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ
ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ಮನೆ ಕಟ್ಟಲು ಪಡೆದಿದ್ದ ಸಾಲ ತೀರಿಸಲಾಗದೆ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂ. ಚಂದ್ರಶೇಖರ್(35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಆರ್ಟಿ ನಗರದ ಪ್ಯಾರಾಚೂಟ್ ರೆಜಮೆಂಟ್ನ ಯೋಧರಾಗಿದ್ದು, ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿದ್ದರು ಎನ್ನಲಾಗಿದೆ.
ಚಂದ್ರಶೇಖರ್, ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು. ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸಾಗಬೇಕಿತ್ತು. ಮನೆಗಾಗಿ ಮಾಡಿರುವ ಸಾಲ ತೀರಿಸಲಾಗದೆ ಚಂದ್ರಶೇಖರ್ ಪರದಾಟ ನಡೆಸುತ್ತಿದ್ದರು. ಇದರಿಂದಾಗಿ ಮನ ನೊಂದಿದ್ದ ಅವರು, ಪ್ರಾಣ ಕಳೆದುಕೊಂಡಿದ್ದಾರೆ.