ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟವು 90 ಅಡಿಗೆ ಕುಸಿದಿದ್ದು, ಬೆಂಗಳೂರು ನಗರ ಸೇರಿದಂತೆ ಹಳೆ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ.
124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಈಗ 90 ಅಡಿ ನೀರು ಸಂಗ್ರಹವಿದೆ. ಒಟು 16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ಏಳು ಟಿಎಂಸಿ ಇದ್ದು ಒಂಬತ್ತು ಟಿಎಂಸಿ ನೀರು ಬಳಕೆಗೆ ಲಭ್ಯವಿದೆ.
ಲಭ್ಯವಿರುವ ಒಂಬತ್ತು ಟಿಎಂಸಿ ನೀರನ್ನು ಹಂಚಿಕೆ ಮಾಡುವುದು ಸರ್ಕಾರಕ್ಕೆ ಸವಾಲಾಗಿದೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳ ಕುಡಿಯುವ ನೀರಿನ ಪೂರೈಸುವುದರ ಜೊತೆಗೆ ಮಂಡ್ಯ ಭಾಗದ ರೈತರು ಬೆಳೆದಿರುವ ಬೆಳೆಗಳ ರಕ್ಷಣೆಗಾಗಿ ನೀರು ಅಗತ್ಯವಿದೆ. ತಮಿಳುನಾಡಿಗೆ ಪ್ರತಿ ತಿಂಗಳ ಕೋಟಾ ಪ್ರಕಾರ ನೀರು ಬಿಡಬೇಕಿದೆ. ಮುಂಗಾರು ಮಳೆ ಸರಿಯಾದ ಸಮಯಕ್ಕೆ ಸುರಿಯದಿದ್ದರೆ ಪ್ರವೇಶಿಸದಿದ್ದರೆ ಹಳೆ ಮೈಸೂರು ಭಾಗದ ಜನ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.


