Wednesday, August 26, 2026
Menu

ಕೆಪಿಎಸ್ಸಿ ಅಕ್ರಮ: ಶಿವಶಂಕರಪ್ಪ ಸಾಹುಕಾರ್ ಎರಡನೇ ಬಾರಿ ಅಮಾನತು

ಕೆಪಿಎಸ್ಸಿ ನೇಮಕದಲ್ಲಿ ಅಕ್ರಮ ಸೇರಿದಂತೆ ವಿವಾದಗಳ ಹಿನ್ನೆಲೆ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಎರಡನೇ ಬಾರಿ ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈ ಹಿಂದಿನ ಅಮಾನತು ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿತ್ತು.

ಈ ಹಿಂದೆ ಅಮಾನತು ಆದೇಶದಲ್ಲಿ ಉಂಟಾಗಿದ್ದ ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ರಾಜ್ಯ ಸರ್ಕಾರವು, ನಿಯಮಾನುಸಾರ ಪ್ರಕ್ರಿಯೆ ಪೂರ್ಣಗೊಳಿಸಿ ಈ ಕ್ರಮ ಕೈಗೊಂಡಿದೆ. ರಾಜ್ಯ ಸಚಿವವ ಸಂಪುಟದ ಅಧಿಕೃತ ಅನುಮತಿ ಪಡೆಯದೆ ಕೆಪಿಎಸ್ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿರುವುದು ಕಾನೂನು ಬಾಹಿರ ಕ್ರಮವೆಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು. ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳುವಾಗ ಅನುಸರಿಸಬೇಕಾದ ಕಡ್ಡಾಯ ನಿಯಮ ಪಾಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಬಳಿಕ ರಾಜ್ಯ ಸರ್ಕಾರವು ಅಮಾನತು ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಪೂರ್ಣಗೊಳಿಸಿತು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆಗಸ್ಟ್ 21ರಂದು ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವಿಷಯವನ್ನು ಚರ್ಚಿಸಿದ ಬಳಿಕ, ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲು ಅಧಿಕೃತವಾಗಿ ಒಪ್ಪಿಗೆ ನೀಡಲಾಯಿತು. ಅಮಾನತಿಗೆ ಅಧಿಕೃತ ಶಿಫಾರಸನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿಕೊಡಲಾಗಿತ್ತು.​ ಸಚಿವ ಸಂಪುಟದ ಒಪ್ಪಿಗೆ ಹಾಗೂ ಸರ್ಕಾರದ ಅಧಿಕೃತ ಶಿಫಾರಸನ್ನು ವಿವರವಾಗಿ ಪರಿಶೀಲಿಸಿದ ರಾಜ್ಯಪಾಲರು ಎರಡನೇ ಬಾರಿಗೆ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

​ಭಾರತದ ರಾಷ್ಟ್ರಪತಿಗಳು ಅಂತಿಮವಾಗಿ ಮುಂದಿನ ಆದೇಶವನ್ನು ಹೊರಡಿಸುವವರೆಗೂ ಈ ಅಮಾನತು ಆದೇಶವು ಕಡ್ಡಾಯವಾಗಿ ಜಾರಿಯಲ್ಲಿರುತ್ತದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

Related Posts

Leave a Reply

Your email address will not be published. Required fields are marked *