ಚಿನ್ನವನ್ನು ಬ್ಯಾಂಕ್ನಲ್ಲಿ ಅಡವಿಟ್ಟು ಖಾತೆಗೆ ಹಣ ಜಮೆ ಮಾಡಿ ಹೊರ ಬರುವಷ್ಟರಲ್ಲಿ ಸೈಬರ್ ವಂಚಕರು ಆ ಹಣವನ್ನು ಎಗರಿಸಿರುವ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ.
ವಕೀಲರೊಬ್ಬರು ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್ನಿಂದ ಹೊರಬರುವ ಮೊದಲೇ ಅವರ ಖಾತೆಯಿಂದ 99,584 ರೂಪಾಯಿಯನ್ನು ಸೈಬರ್ ವಂಚಕರು ಎಗರಿಸಿದ್ದಾರೆ.
ಅವರಿಗೆ ಯಾವುದೇ ಒಟಿಪಿ ಬಂದಿಲ್ಲ, ಎಪಿಕೆ ಲಿಂಕ್ ಬಂದಿಲ್ಲ. ಆದರೆ ಹಣವನ್ನು ವಂಚಕರು ಲಪಟಾಯಿಸಿದ್ದಾರೆ. ಅಮೆಜಾನ್ ಪೇ ಮೂಲಕ ವಂಚಕರು ಹಣ ಎಗರಿಸಿದ್ದಾರೆ. ಹಣ ಕಳೆದುಕೊಂಡ ವಕೀಲ ಚಿಕ್ಕಮಗಳೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪತ್ನಿಗೆ ಚಾಕು ಇರಿಯಲು ಮುಂದಾದ ಪತಿಗೆ ಧರ್ಮದೇಟು
ಪತ್ನಿಗೆ ಚಾಕು ಇರಿಯಲು ಮುಂದಾದ ಪತಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ದಾಸನಪುರದಲ್ಲಿ ನಡೆದಿದೆ. ಸಂಜಯ್ ಎಂಬಾತ ಪತ್ನಿಗೆ ಚಾಕು ಇರಿಯಲು ಮುಂದಾದಾಗ ಸಾರ್ವಜನಿಕರು ರಕ್ಷಣೆ ಮಾಡಿ, ಧರ್ಮದೇಟು ನೀಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಂಜಯ್ ಕುಡಿತದ ಚಟದಿಂದಾಗಿ ಎರಡನೇ ಪತ್ನಿ ಆತನನ್ನು ಬಿಟ್ಟು ಹೋಗಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಆಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಬೈಕ್ನಲ್ಲಿ ಬಂದು ಅಡ್ಡಗಟ್ಟಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಆರೋಪಿ ಸಂಜಯ್ನನ್ನು ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.


