ಬೆಂಗಳೂರು: ಮಕ್ಕಳಲ್ಲಿ ಉದ್ಯಮ ಮನೋಭಾವ ಬೆಳೆಸಲು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯು ವೈವಿಸಿಸಿ (Young Value Creators Circle) ಪಠ್ಯಕ್ರಮ ಪರಿಚಯಿಸುವ ಮೂಲಕ ಶಿಕ್ಷಣದ ಹೊಸ ವ್ಯಾಖ್ಯಾನ ಬರೆದಿದೆ.
ಬೆಂಗಳೂರಿನ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಪಠ್ಯಕ್ರಮವನ್ನು ಅನಾವರಣ ಮಾಡಲಾಯಿತು. ಬೋವರ್ ಸ್ಕೂಲ್ ಆಫ್ ಎಂಟರ್ಪೈನಶಿಪ್ ಸಂಸ್ಥೆಯ ಸಹಯೋಗದಲ್ಲಿ 11 ಹಾಗೂ 12ನೇ ತರಗತಿ ಮಕ್ಕಳಲ್ಲಿ ಸಿಬಿಎಸ್ ಸಿ ಪಠ್ಯಕ್ರಮದ ಜತೆಗೆ ಉದ್ಯಮದ ಮನೋಭಾವ ರೂಪಿಸುವ ಕಾರ್ಯಕ್ರಮ ಪರಿಚಯಿಸಲಾಗಿದೆ.
ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಟ್ರಸ್ಟೀ ಕಾರ್ಯದರ್ಶಿ ಐಶ್ವರ್ಯ ಡಿಕೆಎಸ್ ಹೆಗಡೆ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಬಿಎಸ್ ಸಿ ಮಾಜಿ ನಿರ್ದೇಶಕರಾದ ಬಾಲಸುಬ್ರಮಣಿಯನ್ ಜಿ, ಬೋವರ್ ಸ್ಕೂಲ್ ಆಫ್ ಎಂಟರ್ಪ್ರನೋರ್ಶಿಪ್ ಸಂಸ್ಥಾಪಕರಾದ ಪವನ್ ಆಲೆನ್, ಟಿ ಹಬ್ ಮಾಜಿ ಸಿಇಒ ಶ್ರೀನಿವಾಸ್ ರಾಮ್ ಮಹಂಕಳಿ, ಸೆಂಟರ್ ಆಫ್ ಪ್ರೋಆಕ್ಟೀವ್ ಆಯುರ್ವೇದ ಸಂಸ್ಥಾಪಕಿ ಡಾ.ಜನನಿ ಜಯಶಂಕರ್, ದ ಮೈಂಡ್ ಸ್ಪೇಸ್ ಸಂಸ್ಥಾಪಕರಾದ ಶ್ರುತಿ ಡಾಸ್ ಅವರು ಉಪಸ್ಥಿತರಿದ್ದರು.
ಹೈದರಾಬಾದ್ ಮೂಲದ ಈ ಸಂಸ್ಥೆಯು ಮಕ್ಕಳಲ್ಲಿ ಸಮಸ್ಯೆ ನಿವಾರಣೆ ಕೌಶಲ್ಯ, ಕ್ರಿಯಾಶೀಲತೆ, ಅನ್ವೇಷಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಆಮೂಲಕ ಮಕ್ಕಳನ್ನು ಭವಿಷ್ಯದಲ್ಲಿ ಬದಲಾವಣೆ ತರುವ ನಾಯಕರನ್ನಾಗಿ ರೂಪಿಸಲಾಗುವುದು.
ಇದು ಕೇವಲ ಕಾರ್ಯಕ್ರಮ ಮಾತ್ರವಲ್ಲ, ಯುವ ಮನಸ್ಸುಗಳು ತಮ್ಮದೇ ಆದ ವಿಭಿನ್ನ ಆಲೋಚನೆಗಳ ಮೂಲಕ ಉದ್ಯಮವನ್ನು ಅನ್ವೇಷಣೆ ಮಾಡಲು ಒಂದು ವೇದಿಕೆಯಾಗಿದೆ. ಇಲ್ಲಿ ಮಕ್ಕಳಿಗೆ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಉದ್ಯಮ, ಜಗತ್ತಿನ ಯೋಜನೆಗಳ ಬಗ್ಗೆ ಅಧ್ಯಯನ ಮಾಡಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಐಶ್ವರ್ಯ ಡಿಕೆಎಸ್ ಹೆಗಡೆ ಅವರು, “ಶಿಕ್ಷಣ ಎಂದರೆ ಕೇವಲ ಜ್ಞಾನ ಸಂಪಾದನೆ ಮಾಡುವುದಷ್ಟೇ ಅಲ್ಲ. ಆ ಜ್ಞಾನವನ್ನು ನಿಜ ಜಗತ್ತಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಕಲಿಯುವುದಾಗಿದೆ. ಈ ವೈವಿಸಿಸಿ ಪಠ್ಯಕ್ರಮ ಮಕ್ಕಳು ಹೊಸ ಆಯಾಮದಲ್ಲಿ ಆಲೋಚಿಸಿ ಜವಾಬ್ದಾರಿಯುತ ಉದ್ಯಮಿಗಳಾಗಲು ನೆರವಾಗಲಿದೆ” ಎಂದು ಅಭಿಪ್ರಾಯಪಟ್ಟರು.