ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಎಸ್ಟಿಪಿಗಳ ಗುಣಮಟ್ಟದ ಬಗ್ಗೆ ಕೇಂದ್ರ ಸರಕಾರ ಜಲ್ ಹಿ ಅಮೃತ್ ಯೋಜನೆ ಅಡಿಯಲ್ಲಿ ಶ್ಲಾಘಿಸಿದೆ. 23 ಎಸ್ಟಿಪಿಗಳಿಗೆ ಕ್ಲೀನ್ ವಾಟರ್ ಕ್ರೆಡಿಟ್ ನ ಅಡಿಯಲ್ಲಿ 5 ಸ್ಟಾರ್ ರೇಟಿಂಗ್ ನೀಡಿದ್ದು ಪ್ರೋತ್ಸಾಹ ಧನವಾಗಿ 103 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಮೂಲಕ ಬೆಂಗಳೂರು ಜಲಮಂಡಳಿ ಮತ್ತೊಂದು ಹೆಗ್ಗಳಿಕೆ ಪಾತ್ರವಾಗಿದೆ.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಡಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 1450 ಎಂ.ಎಲ್.ಡಿ ಯಷ್ಟು ನೀರನ್ನು ಸಂಸ್ಕರಿಸಲಾಗುತ್ತದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 34 ಎಸ್ಟಿಪಿಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಎಸ್ಟಿಪಿಗಳಿಂದ ಸಂಸ್ಕರಿಸಲಾಗುವ ನೀರನ್ನು ಬೆಂಗಳೂರು ಕೆರೆಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ.
ಜಲ್ ಹಿ ಅಮೃತ್ ಯೋಜನೆಯ ಅಡಿಯಲ್ಲಿ ದೇಶದ ನಗರಗಳಲ್ಲಿನ ಎಸ್ಟಿಪಿಗಳ ಗುಣಮಟ್ಟ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನೀರಿನ ಸಂಸ್ಕರಣೆಯನ್ನು ಮಾಡುವಂತಹ ಎಸ್ಟಿಪಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಜಲಮಂಡಳಿಗೆ ಅತಿಹೆಚ್ಚು ಸ್ಟಾರ್ ರೇಟಿಂಗ್ ದೊರೆಯುವ ಮೂಲಕ ಹೆಚ್ಚಿನ ಪ್ರೋತ್ಸಾಹ ಧನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸರಕಾರದಿಂದ ಶ್ಲಾಘನೆ:
ಬೆಂಗಳೂರು ಜಲಮಂಡಳಿ ತನ್ನ ಎಸ್ಟಿಪಿಗಳನ್ನು ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವಂತಹ ಮಾನದಂಡಗಳ ಬಗ್ಗೆ ಕೇಂದ್ರ ಸರಕಾರ ವಸತಿ ಮತ್ತು ನಗರಾಭಿವೃದ್ದಿ ಮಂತ್ರಾಲಯ ಶ್ಲಾಘಿಸಿದೆ. ನಮ್ಮ 23 ಎಸ್ಟಿಪಿಗಳಿ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು. 6 ಪ್ಲಾಂಟ್ಗಳು 4 ಸ್ಟಾರ್ ಹಾಗೂ 1 ಪ್ಲಾಂಟ್ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ದೇಶದಲ್ಲಿ ಗುಜರಾತ್, ಮಹರಾಷ್ಟ್ರ ಹೊರತುಪಡಿಸಿದರೆ ನಮ್ಮ ಬೆಂಗಳೂರು ಜಲಮಂಡಳಿ ಅತಿಹೆಚ್ಚು ಪ್ರೋತ್ಸಾಹ ಧನವನ್ನು ಪಡೆದುಕೊಂಡಿದೆ.
ಸನ್ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಬೆಂಗಳೂರು ನಗರವನ್ನ ಇನ್ನಷ್ಟು ಸುಂದರಗೊಳಿಸುವ ಹಾಗೂ ಸುಸ್ಥಿರ ಯೋಜನೆಗಳನ್ನ ಅಳವಡಿಸಿಕೊಳ್ಳುವುದು ಬ್ರಾಂಡ್ ಬೆಂಗಳೂರು ಯೋಜನೆಯ ಪ್ರಮುಖ ಉದ್ದೇಶ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನ ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸುವುದು ನಮ್ಮ ಆದ್ಯತೆಯಾಗಿದೆ. ಇದನ್ನ ಪುರಸ್ಕರಿಸಿ ಕೇಂದ್ರ ಸರ್ಕಾರದ ವತಿಯಿಂದ ಪ್ರೋತ್ಸಾಹ ದೊರೆತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ, ಬೆಂಗಳೂರು ಜಲಮಂಡಳಿ ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿರುವ ನಾವು, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ 8 ತಿಂಗಳಿನಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ಪ್ರೋತ್ಸಾಹ ಧನವನ್ನು ಈ ಎಸ್ಟಿಪಿಗಳನ್ನು ಇನ್ನಷ್ಟು ಆಧುನಿಕರಿಸಲು ಬಳಸಲಿದ್ದೇವೆ ಎಂದಿದ್ದಾರೆ.