ರಾಜ್ಯದ ಗಡಿಭಾಗ ತಮಿಳುನಾಡಿಗೆ ಸೇರಿರುವ ಅಂಚೆಟ್ಟಿ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಿ, ಬಾಲಕಿ ಬರುವುದಿಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಘಟನೆ ನಡೆದಿದೆ.
ಈ ದೃಶ್ಯದ ವೀಡಿಯೊ ವೈರಲ್ ಆಗಿದ್ದು, ಆರೋಪಿಗಳು ಮದುವೆ ಮಾಡಿ ಬಾಲಕಿ ಅಳುತ್ತಾ ಕಿರುಚಾಡಿದರೂ ಬಿಡದೆ ಎಳೆದೊಯ್ದು ಕ್ರೂರವಾಗಿ ವರ್ತಿಸಿದ್ದಾರೆ. ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ಡೆಂಕಣಿಕೋಟೆ ಮಹಿಳಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕಿಗೆ ಇಷ್ಟವಿಲ್ಲದಿದ್ದರೂ ಪೋಷಕರು ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾಲಕಿಯ ತಾಯಿಯ ಸ್ವಂತ ತಮ್ಮನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ ಅಂಚೆಟ್ಟಿಯ ಮನೆಗೆ ಬಂದಿದ್ದರು. ಅಲ್ಲಿಂದ ಆಕೆಯನ್ನು ಯುವಕನ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಬಾಲಕಿ ಒಪ್ಪದಿದ್ದಾಗ ಆಕೆಯನ್ನು ಭುಜದ ಮೇಲೆ ಹಾಕಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾರೆ. ದಾರಿಯುದ್ದಕ್ಕೂ ಬಾಲಕಿ ಕಿರುಚಾಡಿದರೂ ಆರೋಪಿಗಳ ಮನಸ್ಸು ಕರಗಲಿಲ್ಲ. ಈ ವೀಡಿಯೊ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಡೆಂಕಣಿಕೋಟೆ ಮಹಿಳಾ ಪೊಲೀಸರು ಬಾಲ್ಯ ವಿವಾಹವಾಗಿದ್ದ ಮಾದೇಶ್, ಆತನ ಅಣ್ಣ ಮಲ್ಲೇಶ್, ಪತ್ನಿ ಮುನಿಯಮ್ನಲ್, ಬಾಲಕಿ ತಾಯಿ ನಾಗಮ್ಮ, ಸಂಬಂಧಿ ಮುನಿಯಪ್ಪನ್ ಎಂಬವರನ್ನು ಬಂಧಿಸಿದ್ದಾರೆ.