ಮದುವೆಗೆ ನಿರಾಕರಿಸಿದ್ದ ಪ್ರೇಯಸಿಯ ಕತ್ತು ಸೀಳಿ ಪಾಗಲ್ ಪ್ರೇಮಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಶಹಾಪುರದ ನವಿ ಗಲ್ಲಿಯಲ್ಲಿ ನಡೆದಿದೆ.
ಯಳ್ಳೂರು ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಒಂದೂವರೆ ವರ್ಷದಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರಶಾಂತ್ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಈ ವೇಳೆ ಯುವತಿಯ ತಾಯಿ, ಚೆನ್ನಾಗಿ ಕೆಲಸ ಮಾಡಿ, ಸಂಬಳ ಜಾಸ್ತಿ ತೆಗೆದುಕೋ ಎಂದು ಬುದ್ಧಿವಾದ ಹೇಳಿದ್ದರು.
ಪ್ರಶಾಂತ್ ತನ್ನ ಪ್ರೇಯಸಿಯನ್ನು ಆಕೆಯ ಚಿಕ್ಕಮ್ಮನ ಮನೆಗೆ ಕರೆಸಿಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಗೆ ವಿಷ ಕುಡಿಸಲು ಯತ್ನಿಸಿದ್ದ. ಬಳಿಕ ಚಾಕುವಿನಿಂದ ಆಕೆಯ ಕತ್ತು ಸೀಳಿ, ಅದೇ ಚಾಕುವಿನಿಂದ ಆತನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯನಾಯಕರಿಂದ ಮಾಹಿತಿ ಪಡೆದರು.