ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಬುಧವಾರ ಮುಂಜಾನೆ ಕಲ್ಲುಬಂಡೆಗಳ ಮೇಲಿಂದ ನದಿಗೆ ಜಿಗಿದ ಯುವ ವೈದ್ಯೆಯ ಶವ ಪತ್ತೆಯಾಗಿದೆ.
ಮೃತ ವೈದ್ಯೆಯನ್ನು ಹೈದರಾಬಾದ್ನ ನಾಂಪಲ್ಲಿ ಪ್ರದೇಶದ ನಿವಾಸಿ, ಎಂಬಿಬಿಎಸ್ ಪದವೀಧರೆ ಅನನ್ಯ ಮೋಹನ್ (26) ಎಂದು ಗುರುತಿಸಲಾಗಿದೆ. ಆಕೆ ಪ್ರತಿಭಾವಂತ ಭರತನಾಟ್ಯ ಕಲಾವಿದೆಯೂ ಆಗಿದ್ದರು.
ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಕಲ್ಲುಬಂಡೆಗಳ ಮೇಲಿಂದ ನದಿಗೆ ಜಿಗಿಯಲು ಸಿದ್ದವಾಗಿ ವೀಡಿಯೊ ಮಾಡ್ತಿದ್ದ ಸ್ನೇಹಿತರಿಗೆ ಹಾಯ್ ಹೇಳಿ ಜಿಗಿದ ಕೆಲವೇ ನಿಮಿಷಗಳಲ್ಲಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ನೀರಿಗೆ ಜಿಗಿದಿದ್ದ ಸ್ಥಳದಿಂದ 400 ಮೀ. ದೂರ ಶವ ಪತ್ತೆಯಾಗಿದೆ. ಮೃತ ಅನನ್ಯಾರಾವ್, ಹೈದ್ರಾಬಾದ್ನ ಮೇದಕ್ ಕ್ಷೇತ್ರದ ಶಾಸಕ ರೋಹಿತ್ ಮೈನಪಲ್ಲಿಯ ಸಂಬಂಧಿ. ಸುದ್ದಿ ತಿಳಿದು ಸ್ಥಳಕ್ಕೆ ಶಾಸಕರ ಕುಟುಂಬಸ್ಥರು, ಅನನ್ಯರಾವ್ ಕುಟುಂಬಸ್ಥರು ಬಂದಿದ್ದರು. ಅನನ್ಯ ಸ್ನೇಹಿತರ ಜೊತೆಗೆ ರಜೆ ಕಳೆಯಲು ಸ್ಥಳೀಯ ಪ್ರವಾಸಿ ತಾಣಗಳಾದ ಅಂಜನಾದ್ರಿ, ಪಂಪಾಸರೋವರ, ಸಣಾಪೂರ ಕೆರೆಗೆ ಭೇಟಿ ನೀಡಿ, ತುಂಗಭದ್ರಾ ನದಿಯ ದಡದಲ್ಲಿಯೇ ಇದ್ದ ರೆಸಾರ್ಟ್ನಲ್ಲಿ ಮಂಗಳ ವಾರ ರಾತ್ರಿ ಉಳಿದುಕೊಂಡಿದ್ದು, ಬುಧವಾರ ಮುಂಜಾನೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಕಲ್ಲು ಬಂಡೆಯ ಮೇಲಿಂದ ಜಿಗಿದಿದ್ದಳು. ನೀರಿನ ರಭಸಕ್ಕೆ ಅನನ್ಯ ನೀರಿನಲ್ಲಿ ಮುಳುಗಿದ್ದರು.
ದಡದಲ್ಲಿಯೇ ಇದ್ದ ಸ್ನೇಹಿತರು ಅನನ್ಯಾಳನ್ನು ಹುಡುಕಲು ಮುಂದಾಗಿದ್ದರು. ಅನನ್ಯ ದೇಹ ಕಾಣಿಸಿಕೊಳ್ಳದೆ ಇರುವುದರಿಂದ ಗಾಬರಿಗೊಂಡು ಸ್ಥಳೀಯ ಹಾಗೂ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಲಾಗಿತ್ತು. ಬಳಿಕ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿ ಶವ ಪತ್ತೆ ಮಾಡಿದ್ದಾರೆ.