ಭಾರತ ಕ್ರಿಕೆಟ್ ತಂಡದ ಸಭ್ಯ ಕ್ರಿಕೆಟಿಗ ಎಂದೇ ಖ್ಯಾತರಾದ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಅವರ ಕಾರು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಣ್ಣ ಪ್ರಮಾಣದಲ್ಲಿ ಅಪಘಾತ ಸಂಭವಿಸಿದ್ದು, ಯಾವುದೇ ಅಪಾಯ ಆಗಿಲ್ಲ. ಆದರೆ ಗಾಡಿಗೆ ಟಚ್ ಆಗಿದೆ ಎಂಬ ಕಾರಣಕ್ಕೆ ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದ್ದು, ವೀಡಿಯೊ ವೈರಲ್ ಆಗಿದೆ.
ರಾಹುಲ್ ದ್ರಾವಿಡ್ ಇಂಡಿಯನ್ ಎಕ್ಸ್ ಪ್ರೆಸ್ ಕಡೆಯಿಂದ ಹೈಗ್ರೌಂಡ್ಸ್ ಕಡೆಗೆ ಹೋಗುತ್ತಿದ್ದಾಗ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಂಜೆ 6.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ದ್ರಾವಿಡ್ ಕಾರು ಚಲಾಯಿಸುತ್ತಿದ್ದರೆ ಎಂಬುದು ದೃಢಪಟ್ಟಿಲ್ಲ.
ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ಉಂಟಾಗಿದ್ದು, ಆಟೋ ಚಾಲಕನ ಮೊಬೈಲ್ ನಂಬರ್ ಪಡೆದ ದ್ರಾವಿಡ್ ಕೆಲವೇ ಕ್ಷಣಗಳಲ್ಲಿ ಹೊರಟಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಭಾರತದ ಕ್ರಿಕೆಟ್ ತಂಡದ ಕಲಾತ್ಮಕ ಬ್ಯಾಟ್ಸ್ ಮನ್ ಆಗಿದ್ದ ದ್ರಾವಿಡ್ 24 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಅಲ್ಲದೇ ಭಾರತ ತಂಡದ ಮುಖ್ಯ ಕೋಚ್ ಆಗಿ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.
Indian cricketer Rahul Dravid's car & a commercial goods vehicle were involved in a minor accident on Cunningham road in #Bengaluru. And unlike the #cred ad, #RahulDravid & the goods vehicle driver engaged in a civilized argument & left the place later. No complaint so far pic.twitter.com/HJHQx5er3P
— Harish Upadhya (@harishupadhya) February 4, 2025