ಬೆಂಗಳೂರು: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ `ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು ಪ್ರತ್ಯೇಕ ರೌಂಡ್ ಟೇಬಲ್ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, `ಸಮಾವೇಶದ ಎರಡನೆಯ ದಿನವಾದ ಫೆ,13ರಂದು ಈ ಗೋಷ್ಠಿ ನಡೆಯಲಿದೆ. ಈ ಸಂದರ್ಭದಲ್ಲಿ ವಿದೇಶಗಳ 5-6 ಮತ್ತು ಭಾರತದ 7-8 ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಕೂಡ ಇದೆ. ಈ ಸಂಬಂಧ ಮಾತುಕತೆ ಪ್ರಗತಿಯಲ್ಲಿದ್ದು, ಯಾವ ವಿ.ವಿ.ಗಳೊಂದಿಗೆ ಒಡಂಬಡಿಕೆ ಆಗಲಿದೆ ಎನ್ನುವುದನ್ನು ನಂತರದ ದಿನಗಳಲ್ಲಿ ಅಂತಿಮವಾಗಲಿದೆ. ಯುಜಿಸಿ ನಿಯಮಗಳ ಪ್ರಕಾರ, ಜಗತ್ತಿನ ಮೊದಲ 500 ಸ್ಥಾನಗಳಲ್ಲಿರುವ ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ಸನ್ನು ತೆರೆಯಲು ಅವಕಾಶವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೋದ್ಯಮಗಳಲ್ಲಿನ ಹೂಡಿಕೆ ಬಗ್ಗೆ ಮಾತ್ರ ಗಮನವಿರುವುದಿಲ್ಲ. ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯೂ ಸೇರಿದಂತೆ ಸಂಶೋಧನೆ ಮತ್ತು ಅದಕ್ಕೆ ಪೂರಕವಾಗಿರುವ ವಲಯಗಳಿಗೂ ಆದ್ಯತೆ ಇರಲಿದೆ. ಏಕೆಂದರೆ, ಕ್ವಿನ್ ಸಿಟಿ ಯೋಜನೆಯು ಭವಿಷ್ಯದ ನಗರಾಭಿವೃದ್ಧಿಯ ಪರಿಕಲ್ಪನೆ ಮತ್ತು ಜಾಗತಿಕ ಗುಣಮಟ್ಟದ ಉದ್ಯಮಶೀಲತೆ, ಕೌಶಲ ಮುಂತಾದವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಒಂದೂವರೆ ಗಂಟೆ ಕಾಲದ ಈ ಗೋಷ್ಠಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಜೀಂ ಪ್ರೇಂಜಿ, ಪಿಇಎಸ್, ಎಂ ಎಸ್ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ, ದಯಾನಂದ ಸಾಗರ್, ಚಾಣಕ್ಯ, ಸೆಂಟ್ ಜೋಸೆಫ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಅಮಿಟಿ, ಬಿಎಲ್ ಡಿಇ, ಕ್ರೈಸ್ಟ್, ಜೈನ್, ಕೆಎಲ್ಇ ಸೇರಿದಂತೆ ಇನ್ನೂ ಅನೇಕ ಪರಿಷ್ಟಿತ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಐಐಎಸ್ಸಿ, ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ನಿಮ್ಹಾನ್ಸ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ನ್ಯೂಯಾರ್ಕಿನ ಸೆಂಟ್ ಜಾನ್ ಯೂನಿವರ್ಸಿಟಿ, ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಯಾರ್ಕ್, ವೆಲ್ಲೂರಿನ ವಿಐಟಿ ಮತ್ತು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಪಿಲಾನಿಯ ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಬಿಟ್ಸ್), ಶಾಸ್ತ್ರ ಯೂನಿವರ್ಸಿಟಿ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗಳ ಪರಿಣತರೂ ಭಾಗವಹಿಸಲು ವಿಶ್ವಾಸ ಇದೆ ಎಂದು ಅವರು ನುಡಿದಿದ್ದಾರೆ.
ಮಿಗಿಲಾಗಿ ಅಜೀಂ ಪ್ರೇಂಜಿ, ಇನ್ಫೋಸಿಸ್, ರಿಲಯನ್ಸ್, ಅದಾನಿ, ಭಾರತಿ, ವಿಪ್ರೋ, ಬಯೋಕಾನ್, ಕೊಟಕ್ ಎಜುಕೇಶನ್, ಶಿವ ನಾಡಾರ್, ಬಜಾಜ್ ಮತ್ತು ಮಹೀಂದ್ರ ಪ್ರತಿಷ್ಠಾನಗಳು, ಟಾಟಾ ಟ್ರಸ್ಟ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್, ಆದಿತ್ಯ ಬಿರ್ಲಾ ಗ್ರೂಪ್ ಸಿಎಸ್ಆರ್ ಹಾಗೂ ಏಷ್ಯನ್ ಪೇಂಟ್ಸ್ ಸಿಎಸ್ಆರ್ ಸಂಸ್ಥೆಗಳ ಉನ್ನತ ಮಟ್ಟದ ಪ್ರತಿನಿಧಿಗಳು ಕೂಡ ಇದರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ಪಾಟೀಲ ವಿವರಿಸಿದ್ದಾರೆ.
ದೊಡ್ಡಬಳ್ಳಾಪುರ- ದಾಬಸ್ಪೇಟೆ ಮಧ್ಯೆ ಸುಮಾರು 5000 ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆ ಕುರಿತಾದ ಪ್ರತಿಷ್ಠಿತ ಸಂಸ್ಥೆಗಳು ತಲೆ ಎತ್ತಲಿವೆ.