ಮಹಾಭಾರತ ಕಾಲದಿಂದಲೂ ವರದಿಗಾರಿಕೆ ಇತ್ತು, ಆಗಿನ ಕಾಲದಲ್ಲಿ ಪತ್ರಕರ್ತರನ್ನು ವಾರ್ತಾಕಾರರು ಎಂದು ಕರೆಯುತ್ತಿದ್ದರು ಎಂಬುದಾಗಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾಭಾರತ ಕಾಲದಲ್ಲಿ ವಾರ್ತಾಕಾರರನ್ನು ಕರೆದು ಜನರಿಗೆ ಸುದ್ದಿ ತಲುಪಿಸಲಾಗುತ್ತಿತ್ತು ಎಂಬುದನ್ನು ಮಹಾಭಾರತದ ಸನ್ನಿವೇಶವೊಂದನ್ನು ಉಲ್ಲೇಖಿಸಿ ತಿಳಿಸಿದ ಸ್ವಾಮೀಜಿ, ಸುದ್ದಿ ತಲುಪಿಸುವ ಜೊತೆಗೆ ಪತ್ರಕರ್ತರು ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈಗ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಇದೀಗ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆ ಜೊತೆಗೆ ಸ್ಪರ್ಧಿಸಬೇಕಾಗಿದೆ. ಪತ್ರಕರ್ತರು ಎಐ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಬೇಕು ಎಂದು ಸಲಹೆ ನೀಡಿದರು.
ಡಿ.ವಿ.ಗುಂಡಪ್ಪ ಅವರು ಮಹಾನ್ ದಾರ್ಶನಿಕ, ಅಂಥ ಶ್ರೇಷ್ಠ ವ್ಯಕ್ತಿ ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶುಭವಾಗಲಿ ಎಂದು ಸ್ವಾಮೀಜಿ ಹಾರೈಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರ ಸಂಘದ ಎಸ್.ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ್ರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹಲವು ಪತ್ರಕರ್ತರು ಭಾಗವಹಿಸಿದ್ದರು.


