ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜ್ಯದ ಅತಿ ಉದ್ದದ ಕೊರ್ತಿ–ಕೋಲ್ಹಾರ ಸೇತುವೆ ಮೇಲೆ ಮೂರು ದಿನಗಳ ಹಿಂದೆ ಟಿಪ್ಪರ್ ಮತ್ತು ಕಾರು ಡಿಕ್ಕಿಯಾಗಿ ನಿಯಂತ್ರಣ ತಪ್ಪಿದ ಟಿಪ್ಪರ್ ಕೃಷ್ಣಾ ನದಿಗೆ ಬಿದ್ದಿತ್ತು. ಆ ಟಿಪ್ಪರ್ ಅನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಗಿದ್ದು, ಒಳಭಾಗದಲ್ಲಿ ಚಾಲಕನ ಶವ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್ ನದಿಗೆ ಉರುಳಿದ್ದು, ಪೋಲಿಸರು ಮತತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಟಿಪ್ಪರ್ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿದ್ದಾರೆ.
ಟಿಪ್ಪರ್ನ ಒಳಭಾಗದಲ್ಲಿ ಬಾಗಲಕೋಟೆಯ ನಿವಾಸಿ , ಚಾಲಕ ಸಂತೋಷ್ ಶವ ಪತ್ತೆಯಾಗಿದೆ. ಟಿಪ್ಪರ್ನ ಕ್ಲೀನರ್ ಸಂಜು ಮಲ್ಲಪ್ಪ ಮೂಲಗಿ ಅವರನ್ನು ರಕ್ಷಿಸಲಾಗಿತ್ತು. ಕಾರಿನಲ್ಲಿದ್ದ ಗುರುನಾಥ ರೇಸ್ಮಿ ಹಾಗೂ ಅವರ ಪತ್ನಿ ಜ್ಯೋತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಕಾರ್ಯಾಚರಣೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಘಟನೆಯ ಕುರಿತು ಸಂಬಂಧಪಟ್ಟ ಇಲಾಖೆ ತನಿಖೆಯನ್ನು ಮುಂದುವರಿಸಿದೆ.


