Menu

ಮಳೆ ಕೊರತೆಯಿಂದ ವಿದ್ಯುತ್‌ ವ್ಯತ್ಯಯ, ಮುಂಜಾಗ್ರತಾ ಕ್ರಮಕ್ಕೆ ಸಿಎಂ ಸೂಚನೆ 

ಎಲ್ ನಿನೊ ಪರಿಣಾಮದಿಂದಾಗಿ ಜಲ ವಿದ್ಯುತ್‌ ಉತ್ಪಾದನೆ ಕುಸಿಯುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ವಿಶೇಷ ತುರ್ತು ಕಾರ್ಯಯೋಜನೆ ರೂಪಿಸುವ ಜೊತೆಗೆ ಸಂಗ್ರಹ ಮತ್ತು ಇತರ ಮೂಲಗಳ ಉತ್ಪಾದನೆಗೆ ತುರ್ತು ಗಮನ ಹರಿಸಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಸೂಚನೆ ನೀಡಿದರು.

ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ,  ಬರಗಾಲದ ಪರಿಸ್ಥಿತಿ ಎದುರಿಸಲು ಇಲಾಖೆ ಏನೇನು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎನ್ನುವ ಬಗ್ಗೆ ವಿವರಗಳನ್ನು ಪಡೆದು ಸಾರ್ವಜನಿಕ ಬಳಕೆಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಂಧನ ಭದ್ರತೆಗಾಗಿ ಸರ್ಕಾರಕ್ಕೆ ಮೀಸಲಾದ ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸದ್ಯ ನಮ್ಮಲ್ಲಿ ವಿದ್ಯುತ್‌ ಸಂಗ್ರಹಣಾ ಸ್ಥಿತಿ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್‌ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸದ್ಯದ ಸ್ಥಿತಿಯಲ್ಲಿ ನವೀಕರಿಸಬಹುದಾದ ಇಂಧನದ ಸಮರ್ಥ ನಿರ್ವಹಣೆಗಾಗಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳು (BESS), ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು (PSPs) ತ್ವರಿತವಾಗಿ ಜಾರಿಗೊಳಿಸಬೇಕು ಎಂದರು.

ನಾವು ಐಟಿ ಕ್ಯಾಪಿಟಲ್‌ ಆಗಿದ್ದೇವೆ. ಕೃತಕ ಬುದ್ದಿಮತ್ತೆಯಲ್ಲೂ ನಮ್ಮ ರಾಜ್ಯ ಕ್ಯಾಪಿಟಲ್‌ ಆಗಬೇಕು ಎನ್ನುವ ದಿಕ್ಕಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಹೀಗಾಗಿ ಡೇಟಾ ಸೆಂಟರ್‌ಗಳು, ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯ ಹಾಗೂ ಡಿಜಿಟಲ್ ಆರ್ಥಿಕತೆಯಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಿಂದಾಗಿ ಯಾವುದೇ ಹೊರೆ ಆಗಿಲ್ಲ. ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಪಾವತಿಸಬೇಕಿರುವ 12,631 ಕೋಟಿ ರೂಪಾಯಿ ಬಾಕಿಯನ್ನು ತ್ವರಿತವಾಗಿ ಪಾವತಿಸುವುದು ಅಥವಾ ಹಣಕಾಸು ಭದ್ರತೆ  ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಕೃಷಿ ವಿದ್ಯುತ್ ಸಹಾಯಧನವನ್ನು ವರ್ಷಕ್ಕೆ ₹22,000 ಕೋಟಿ ನೀಡುತ್ತಿದ್ದೇವೆ. ಹೀಗಾಗಿ ಫೀಡರ್ ಸೌರೀಕರಣ, ಇಂಧನ-ದಕ್ಷ ಪಂಪ್‌ಸೆಟ್‌ಗಳ ಬಳಕೆ, ವಿದ್ಯುತ್ ಬೇಡಿಕೆ ನಿರ್ವಹಣೆ  ಕಾರ್ಯಕ್ರಮಗಳನ್ನು ವೇಗಗೊಳಿಸಿ ಎಂದು  ಸಿಎಂ ಸೂಚಿಸಿದರು.

2035ರ ವೇಳೆಗೆ ಗರಿಷ್ಠ ವಿದ್ಯುತ್ ಬೇಡಿಕೆ 38 ಗಿಗಾವ್ಯಾಟ್ (GW) ತಲುಪುವ ನಿರೀಕ್ಷೆಯಿರುವುದರಿಂದ ಇದಕ್ಕೆ ತಕ್ಕಂತೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆ ಜೊತೆಗೆ ಅಗತ್ಯವಾದ ಹಣಕಾಸು ನಕ್ಷೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ಮೀಟರ್‌ಗಳು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ನೆರವು ಪಡೆಯುವ ಉದ್ದೇಶದಿಂದ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಯನ್ನು ವೇಗವಾಗಿ ಅನುಷ್ಠಾನಗೊಳಿಸಬೇಕು. ಸ್ಮಾರ್ಟ್ ಮೀಟರ್‌ಗಳನ್ನು ಪಾರದರ್ಶಕವಾಗಿ ಹಾಗೂ ನಿಗದಿತ ಸಮಯದಲ್ಲಿ ಅಳವಡಿಸಬೇಕು. ರಾಜ್ಯದಲ್ಲಿ ವೇಗವಾಗಿ ಹೆಚ್ಚುತ್ತಿರುವ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯದ ವಿದ್ಯುತ್ ಜಾಲ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ವಿದ್ಯುತ್ ಪ್ರಸರಣ ಯೋಜನೆಗಳಿಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಶೀರ್ಘವಾಗಿ ಬಗೆಹರಿಸಿಕೊಳ್ಳಿ. ಭೂಸ್ವಾಧೀನ, ಹಕ್ಕುಮಾರ್ಗ (Right of Way) ಹಾಗೂ ಕಾನೂನುಬದ್ಧ ಅನುಮತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಯೋಜನೆಗಳನ್ನು ವೇಗಗೊಳಿಸಬೇಕು ಎಂದು ಹೇಳಿದರು.

ಎಸ್ಕಾಂಗಳ ಆರ್ಥಿಕ ಬಲವರ್ಧನೆಗೆ ದ್ರವ್ಯತೆ ಸುಧಾರಣೆ ಹಾಗೂ ಸಾಲ ನಿರ್ವಹಣೆಯ ಮೂಲಕ ಎಸ್ಕಾಂಗಳ ಹಣಕಾಸು ಸ್ಥಿರತೆಯನ್ನು ಹೆಚ್ಚಿಸಬೇಕು. ಪ್ರಸರಣ ಜಾಲವನ್ನು ಬಲಪಡಿಸುವ ಮೂಲಕ ನವೀಕರಿಸಬಹುದಾದ ಇಂಧನದ ಅನಗತ್ಯ ನಿಯಂತ್ರಣ  ಸಮಸ್ಯೆಯನ್ನು ನಿವಾರಿಸಬೇಕು. ಕಲ್ಲಿದ್ದಲು ಸರಬರಾಜು ಭದ್ರತೆಗಾಗಿ ಮೀಸಲು ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಗಣೆ ಮತ್ತು ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಕಲ್ಲಿದ್ದಲು ಭದ್ರತೆಯನ್ನು ಖಚಿತಪಡಿಸಬೇಕು. ವಿದ್ಯುತ್ ವಾಹನ (EV) ಮೂಲಸೌಕರ್ಯಕ್ಕಾಗಿ ರಾಜ್ಯಾದ್ಯಂತ EV ಚಾರ್ಜಿಂಗ್ ಮೂಲಸೌಕರ್ಯವನ್ನು ವೇಗವಾಗಿ ವಿಸ್ತರಿಸುವುದರ ಜೊತೆಗೆ ಅದಕ್ಕೆ ಅಗತ್ಯವಾದ ವಿದ್ಯುತ್ ಜಾಲ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *