ಯಾದಗಿರಿಯ ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ನ ಅಧ್ಯಕ್ಷ ಬಸನಗೌಡ ಪಾಟೀಲ ಮೂರು ಪುಟಗಳ ಡೆತ್ನೋಟ್ ಬರೆದು, ವೀಡಿಯೊ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಕಾರ ಬ್ಯಾಂಕ್ನಲ್ಲಿ 6.62 ಕೋಟಿ ರೂ. ಗೋಲ್ಮಾಲ್ ಆರೋಪ ಎದುರಿಸುತ್ತಿದ್ದ ಅಧ್ಯಕ್ಷ ಬಸವನಗೌಡ ಶಹಪುರ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏಪ್ರಿಲ್ 13ರಂದು ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ,ರು ಶಹಾಪುರ ಠಾಣೆಯಲ್ಲಿ ಸಹಕಾರಿ ಸಂಘದ ಬ್ಯಾಂಕ್ನ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು. ಬ್ಯಾಂಕ್ನ ಸಿಇಒ ರವಿಕಿರಣರೆಡ್ಡಿ, ಸಹಾಯಕ ವ್ಯವಸ್ಥಾಪಕ ವೆಂಕಟರೆಡ್ಡಿ ಹೊಸಮನಿ, ಪಿಗ್ಮಿ ಸಂಗ್ರಹಕಾರ ಸಂಗಣ್ಣ ವಿರುದ್ಧ ದೂರು ನೀಡಲಾಗಿತ್ತು. ನನ್ನ ಸಹಿ ಫೋರ್ಜರಿ ಮಾಡಿ 6.62 ಕೋಟಿ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಬೆಳವಣಿಗೆ ನಂತರ ನಮ್ಮ ಹಣ ನಮಗೆ ನೀಡಿ ಎಂದು ಠೇವಣಿದಾರರು ಬ್ಯಾಂಕ್ ಮುಂದೆ ಧರಣಿ ನಡೆಸಿದ್ದರು. ಧರಣಿ ಆರಂಭವಾಗುತ್ತಿದ್ದಂತೆ ಬಸನಗೌಡ ಊರು ಬಿಟ್ಟು ಹೋಗಿದ್ದರು. ಸೋಮವಾರ ರಾತ್ರಿ ಮನೆಗೆ ವಾಪಸ್ ಮರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ನಲ್ಲಿ ಬರೆದಿರುವುದು ಏನು
ಬ್ಯಾಂಕ್ನ ಅವ್ಯವಹಾರ ಬೆಳಕಿಗೆ ಬಂದ ಬಳಿಕ ನನ್ನ ಸಹಿ ಫೋರ್ಜರಿ ಮಾಡಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಕ್ಕೆ ಏಪ್ರಿಲ್ 13ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಿದ್ದೇನೆ. ಇದೇ ಮೇ 15ರ ಒಳಗೆ ಠೇವಣಿದಾರರಿಗೆ ಹಣ ವಾಪಸ್ ಕೊಡುವುದಾಗಿ ನಾವೆಲ್ಲ ಒಪ್ಪಿಕೊಂಡಿದ್ದು, ಹಣ ದುರುಪಯೋಗಪಡಿಸಿಕೊಂಡವರು ಹಣ ವಾಪಸ್ ಕೊಡುವುದು ವಿಳಂಬ ಮಾಡುತ್ತಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಸಾಲ ಪಡೆದವರು ಹಣ ದುರುಪಯೋಗ ಪಡಿಸಿಕೊಂಡವರು ವಾಪಸ್ ಕೊಡಬೇಕು ಒಪ್ಪಿಕೊಂಡಿದ್ದು, ಜೂನ್ 10ಕ್ಕೆ ಎಲ್ಲಾ ಠೇವಣಿದಾರರಿಗೆ ಹಣ ಕೊಡಬೇಕು ಅಂತ ಮಾತುಕತೆ ನಡೆಸಿದ್ದೆವು. ನಾನು ಎಲ್ಲಾ ಲೋನ್ ಹಣ ಹಿರಿಯರಿಗೆ ಒಪ್ಪಿಸಿದ್ದೇನೆ, ಉಳಿದವರು ಯಾರೂ ಹಣ ಜಮೆ ಮಾಡಿಲ್ಲ.. ಠೇವಣಿದಾರರಿಗೆ ಹಣ ವಾಪಸ್ ಕೊಡಲು ಆಗದ ನೋವು ಕಾಡುತ್ತಿದೆ. ಸಾಲ ಪಡೆದವರು ವಾಪಸ್ ಕೊಡ್ತಾಯಿಲ್ಲ. ನಾವು ಮಾತು ಕೊಟ್ಟ ಹಾಗೆ ನಡೆದುಕೊಳ್ಳಲು ಆಗುತ್ತಿಲ್ಲ. . ಠೇವಣಿದಾರರಿಗೆ ಹಣ ವಾಪಸ್ ಕೊಡಲು ಆಗದ ನೋವು, ಮುಜುಗರ, ಅವಮಾನದಿಂದ ನಿಮ್ಮ ಮುಂದೆ ಬರಲಾಗದೆ ಕ್ಷಮೆ ಕೇಳುತ್ತಿದ್ದೇನೆ. ಅಧ್ಯಕ್ಷನಾಗಿ ಸಿಬ್ಬಂದಿಯನ್ನು ಅತಿಯಾಗಿ ನಂಬಿದ್ದಕ್ಕೆ ಈ ಸ್ಥಿತಿ ಬಂದಿದೆ. ನಮ್ಮ ಕುಟುಂಬಸ್ಥರು ಇದರಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಕೆಲವು ಠೇವಣಿದಾರರು ಮನೆಗೆ ಬಂದು ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ. ಬ್ಯಾಂಕ್ ವಿಷಯವಾಗಿದ್ದಕ್ಕೆ ಮನೆಗೆ ಬರುವುದು ಸರಿಯಲ್ಲ. ಠೇವಣಿ ಇಟ್ಟ ಬಡವರಿಗೆ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಮ್ಮ ಕುಲದೇವತೆ ಎಲ್ಲರಿಗೂ ಹಣ ವಾಪಸ್ ಬರುವ ಹಾಗೆ ಆಶೀರ್ವಾದ ಮಾಡಲಿ ಎಂದು ಬೇಡಿಕೊಂಡಿದ್ದಾರೆ.
ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕ್ನಲ್ಲಿ ಅಂದಾಜು 7 ಕೋಟಿ ರೂ. ದುರ್ಬಳಕೆ ಬಗ್ಗೆ ಏಪ್ರಿಲ್ 13ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


