ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ ಇಲಾಖೆಯನ್ನೇ ಐಸಿಯು ಅಲ್ಲಿ ಇರಿಸುವ ಪರಿಸ್ಥಿತಿ ತಂದಿರುವುದೇ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ. ಜೀವ ಉಳಿಸಬೇಕಾದ ಇಲಾಖೆಯಲ್ಲೇ ಬರೋಬ್ಬರಿ 35,196 ಹುದ್ದೆಗಳು ಖಾಲಿ ಇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಕೇವಲ ಹೆಸರಿಗಷ್ಟೇ ಉಳಿದಿದ್ದು, ಸಮಸ್ಯೆಗಳ ಆಗರಗಳಾಗಿವೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನೋಡಿಕೊಳ್ಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಪ್ಯಾರಾಸಿಟಮಾಲ್ ಮಾತ್ರೆಗಳೂ ಸಿಗದೆ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಬದಲಾದರೂ… ಆರೋಗ್ಯ ಸಚಿವರು ಬದಲಾದರೂ… ಆರೋಗ್ಯ ಇಲಾಖೆಯ ಹಣೆಬರಹ ಮಾತ್ರ ಬದಲಾಗಲಿಲ್ಲ!
ಮುಖ್ಯಮಂತ್ರಿ ಬದಲಾದರು. ಆರೋಗ್ಯ ಸಚಿವರು ಬದಲಾದರು. ಆದರೆ @INCKarnataka ಸರ್ಕಾರದ ನಿರ್ಲಕ್ಷ್ಯ, ಅಸಮರ್ಥತೆ ಮತ್ತು ಜನವಿರೋಧಿ ಆಡಳಿತ ಮಾತ್ರ ಬದಲಾಗಲಿಲ್ಲ!
ಇಂದು ರಾಜ್ಯದ ಆರೋಗ್ಯ ಇಲಾಖೆಯೇ ಐಸಿಯುನಲ್ಲಿದೆ.
🚨 35,196 ಹುದ್ದೆಗಳು… pic.twitter.com/pzWibBReUy
— R. Ashoka (@RAshokaBJP) June 27, 2026
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ನಮ್ಮ ಕ್ಲಿನಿಕ್’ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನವೇ ಇಲ್ಲ. ಬಡವರು ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆರಂಭವಾಗಿದ್ದ ‘ನಮ್ಮ ಕ್ಲಿನಿಕ್’ ಯೋಜನೆಗೂ ಕಾಂಗ್ರೆಸ್ ಸರ್ಕಾರ ಗರ ಬಡಿದಿದೆ. ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನವನ್ನೇ ನೀಡಿಲ್ಲ! ದುಡಿಯುವ ಕೈಗಳಿಗೆ ಸಂಬಳ ಕೊಡಲೂ ಸಾಧ್ಯವಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ @DKShivakumar ಅವರೇ, ತಕ್ಷಣವೇ 35,196 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ. ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲದಿದ್ದರೆ ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ ಸರ್ಕಾರದ ವಿರುದ್ಧ @BJP4Karnataka ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.


