ನಟ ದ್ವಾರಕೀಶ್ ಸೊಸೆ ದಾಖಲಿಸಿದ್ದ ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಹೆಸರು ಕೈಬಿಡಲು ತಲಾ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣದಿಂದ ಕೈಬಿಡಲು ಪ್ರತಿ ಆರೋಪಿಯಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಡಿಯೋ ಲಭ್ಯವಾಗಿದ್ದು, .ಡಿಸಿಆರ್ ಇ ಡಿವೈಎಸ್ಪಿ ಮಹೇಶ್ವರ ಗೌಡ ಹಾಗೂ ಕಾನ್ಸ್ಟೇಬಲ್ ಬಸವರಾಜ್ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರವರಿಯಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸುಕನ್ಯಾ ಹಾಗೂ ಕುಟುಂಬ ಮತ್ತು ಸ್ನೇಹಿತರು ಸೇರಿ ಒಟ್ಟು 19 ಮಂದಿಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಬೆಂಗಳೂರು ಡಿಸಿಆರ್ ಇ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಆರೋಪಿಗಳನ್ನು ಕೇಸ್ನಿಂದ ಕೈಬಿಡಲು ತಲಾ 50,000 ರೂ.ನಂತೆ 19 ಆರೋಪಿಗಳಿಂದ 9.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಸಂಬಂಧಿಸಿದ ಆಡಿಯೋ ಲಭ್ಯವಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದ್ವಾರಕೀಶ್ ಸೊಸೆ ವರ್ಷಾ ರೈ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ರಮಣ ರೆಡ್ಡಿ ಎಂಬವರು ಆರು ಲಕ್ಷ ರೂಪಾಯಿ ನೀಡಿದ್ದರು. ಆ ಹಣವನ್ನು ಕೇಳುವುದಕ್ಕೆ ಹೋಗಿದ್ದಾಗ ವರ್ಷಾ ಬೀದಿಯಲ್ಲೇ ಪೊರಕೆಯಿಂದ ಹಲ್ಲೆ ನಡೆದ್ದು, ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕೆಲವು ವರ್ಷಗಳಿಂದ ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ ವರ್ಷಾ ಮೇಲಿದೆ. ಆಕೆ ಚೀಟಿ ವ್ಯವಹಾರ ನಡೆಸುತ್ತಿದ್ದರು, ಚೀಟಿಗೆ ಹಾಕುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿರುವ ಆರೋಪವಿದೆ.
ಚಿನ್ನದ ಆಭರಣವನ್ನು ತೆಗೆದುಕೊಂಡು ಸಂಬಂಧ ಪಟ್ಟವರಿಗೆ ನೀಡದ ವಂಚನೆ ಮಾಡಿದ್ದಾರೆ ಎಂಬ ಆರೋಪವೂ ಇದೆ. ಹತ್ತಕ್ಕೂ ಅಧಿಕ ಮಂದಿಯಿಂದ ದ್ವಾರಕೀಶ್ ಅವರ ಸೊಸೆ ಹಣ ಹಾಗೂ ಚಿನ್ನವನ್ನು ಪಡೆದು ಹಿಂತಿರುಗಿಸಿಲ್ಲ. ಕೇಳುವುದಕ್ಕೆ ಹೋದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಕೊಟ್ಟಿರುವ ಹಣ ಕೇಳುವುದಕ್ಕೆ ಹೋದವರರಿಗೆ ಪೊಲೀಸರಿಗೆ ಸುಳ್ಳು ದೂರು ನೀಡುವ ಬಗ್ಗೆ ಬೆದರಿಕೆ ಹಾಕುತ್ತಾರೆಂದು ಸಂತ್ರರು ಆರೋಪಿಸಿದ್ದರು. ವರ್ಷಾ ರೈ ವಿರುದ್ಧ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.


