ಬೆಂಗಳೂರಿನ ಮಲ್ಲೇಶ್ವರದ ಮನೆಯೊಂದರಲ್ಲಿ ಯುವಕ ಲಿವ್-ಇನ್ ಗೆಳತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ. ಸಕಲೇಶಪುರದ ೨೦ ವರ್ಷದ ಯುವತಿ ಅನುಷಾ ಕೊಲೆಯಾದವಳು, ಅದೇ ಊರಿನ ಶರತ್ ಕೊಲೆ ಆರೋಪಿ. ಆತ ವೃತ್ತಿಯಲ್ಲಿ ವಾಟರ್ ಟ್ಯಾಂಕರ್ ಚಾಲಕ.
ಇಬ್ಬರೂ ಆರು ತಿಂಗಳ ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗಿದ್ದು, ಇಬ್ಬರೂ ಮಲ್ಲೇಶ್ವರದಲ್ಲಿ ಒಟ್ಟಿಗೆ ವಾಸವಿದ್ದರು. ಮಲ್ಲೇಶ್ವರಂನ ತಾಯಪ್ಪ ಗಾರ್ಡನ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು.
ಅನುಷಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಶರತ್ ಬಟ್ಟೆ, ಪಾತ್ರೆಗಳನ್ನು ಸ್ವತಃ ತೊಳೆಯುತ್ತಿದ್ದನು ಎನ್ನಲಾಗಿದೆ. ಅವರ ನಡುವೆ ಆಗಾಗ್ಗೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿದ್ದವು.
ಎರಡು ತಿಂಗಳ ಹಿಂದೆ ಜಗಳದಿಂದಾಗಿ ಅನುಷಾ ಸಕಲೇಶಪುರಕ್ಕೆ ಹೋಗಿ ಅಲ್ಲೇ ಉಳಿದುಕೊಂಡಿದ್ದಳು. ಕೆಲವು ದಿನಗಳ ಮೊದಲು ಶರತ್ ಅವಳನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದ. ಕರೆತಂದ ಎರಡೇ ದಿನಕ್ಕೆ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಆತ ಕೋಪದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆರೋಪಿ ಶರತ್ ತನ್ನ ಕೃತ್ಯದ ಬಗ್ಗೆ ವಕೀಲರೊಬ್ಬರಿಗೆ ಮಾಹಿತಿ ನೀಡಿದ್ದ. ವಕೀಲರು ತಕ್ಷಣ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದರು. ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ಗಂಡನ ಕಳೆದುಕೊಂಡ ಮಹಿಳೆಗಾಗಿ ಪತ್ನಿಯ ಕೊಲೆ
ಗಂಡನ ಕಳೆದುಕೊಂಡ ಮಹಿಳೆಯ ಮೋಹಕ್ಕೆ ಬಿದ ವ್ಯಕ್ತಿ ಪತ್ನಿಗೆ ದೇವರ ಪ್ರಸಾದವೆಂದು ಇಲಿ ಪಾಷಾಣ ತಿನ್ನಿಸಿ ಕೊಲೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ನಡೆದಿದೆ.
ಸಕ್ಕುಬಾಯಿ ಕೊಲೆಯಾದ ಮಹಿಳೆ, ಪತಿ ಸಂತೋಷ ಪಟಾಯತ್ ಕೊಲೆ ಆರೋಪಿ. ದಂಪತಿ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಹೋಗಿದ್ದರು. ದೇವಾಸ್ಥಾನದಿಂದ ಹಿಂತಿರುಗುವಾಗ ತಂಪು ಪಾನೀಯದಲ್ಲಿ ಸಂತೋಷ್ ಇಲಿ ಪಾಷಾಣ ಹಾಗೂ ಬಳೆ ಚೂರು ಬೆರಸಿ ದೇವಿ ಪ್ರಸಾದ ಎಂದು ಹೆಂಡತಿಗೆ ಕುಡಿಯಲು ಕೊಟ್ಟಿದ್ದಾನೆ. ಅದನ್ನು ಕುಡಿದ ಸಕ್ಕುಬಾಯಿ ನಡುರಸ್ತೆಯಲ್ಲೇ ಪ್ರಜ್ಞೆತಪ್ಪಿ ಬಿದ್ದಾಗ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಬೈಕ್ ಎತ್ತಿ ಆಕೆಯ ಮೇಲೆ ಹಾಕಿದ್ದಾನೆ. ಸ್ವತಃ ತಾನೇ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾನೆ.


