ರಾಜ್ಯದಲ್ಲಿ ಮೇ 20 (ನಾಳೆ) ನಡೆಯಲಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿ ಮುಷ್ಕರ ಮಾಡದಂತೆ ಸಾರಿಗೆ ಸಂಘಟನೆಗಳಿಗೆ ಸೂಚನೆ ನೀಡಿದೆ. ಸರ್ಕಾರ ಮತ್ತು ಸಂಘಟನೆಗಳ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದೆ.
ಮತ್ತೊಂದೆಡೆ ಮುಷ್ಕರಕ್ಕೆ ಕರೆ ನೀಡಿದ್ದ ಜಂಟಿ ಕ್ರಿಯಾ ಸಮಿತಿಯಲ್ಲೇ ಭಿನ್ನಮತ ಸ್ಫೋಟವಾಗಿದೆ. ಕೆಎಸ್ಸಾರ್ಟಿಸಿ ನೌಕರರ ಸಂಘ ಮುಷ್ಕರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದೆ. ಸಂಸ್ಥೆಯ ಎಂಡಿಗೆ ಪತ್ರ ಬರೆದು ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಇದರಿಂದ ಮುಷ್ಕರದ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ.
ಕಾರ್ಮಿಕ ಇಲಾಖೆಯಿಂದ ಈಗಾಗಲೇ ಸಂಧಾನ ಸಭೆ ನಡೆದಿದೆ, ಮೇ 25ರಂದು ಮತ್ತೊಂದು ಸಭೆ ಕರೆಯುವುದಾಗಿ ಭರವಸೆ ಸಿಕ್ಕಿದೆ. ಕೆಎಸ್ಸಾರರ್ಟಿಸಿ ಎಂಡಿಯೊಂದಿಗೂ ಸಭೆ ನಡೆದಿದೆ, ಸಮಸ್ಯೆ ಪರಿಹರಿಸುವ ಭರವಸೆ ದೊರಕಿರುವುದರಿಂದ ಮುಷ್ಕರ ಸರಿಯಲ್ಲ ಎಂದು ನೌಕರರ ಸಂಘ ನಿರ್ಧರಿಸಿದೆ ಎನ್ನಲಾಗಿದೆ.
ನಾಳೆ ಬಸ್ಗಳು ಸಂಚರಿಸುವುದೇ ಎಂಬ ಗೊಂದಲ ಇನ್ನೂ ಸಾರ್ವಜನಿಕರಲ್ಲಿದೆ, ಅಂತಿಮ ನಿರ್ಧಾರ ಹೊರ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ. ವೇತನ ಹೆಚ್ಚಳ, ಹೊಂಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಸಾರಿಗೆ ನೌಕರರು ನಾಳೆ ಸಂಪೂರ್ಣವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಪ್ರಕಟಿಸಿದ್ದರು.


