ಈ ಹಿಂದೆ ಧಾರವಾಡ ಪ್ರತ್ಯೇಕ ಪಾಲಿಕೆ ಕ್ಯಾಬಿನೆಟ್ನಲ್ಲಿ ಪಾಸ್ ಆಗಿ ರಾಜ್ಯಪಾಲರ ಬಳಿ ಹೋಗುವಂತೆ ಮಾಡುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗಲೂ ನಾನು ಪ್ರತ್ಯೇಕ ಪಾಲಿಕೆ ಪರವಾಗಿದ್ದೇನೆ. ಕ್ಯಾಬಿನೆಟ್ ಸಭೆ ಇದ್ದು, ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬಿಜೆಪಿ ಮುಖಂಡರು ರಾಜಕಾರಣ ಬಿಟ್ಟು ಪಕ್ಷಾತೀತವಾಗಿ ಪ್ರತ್ಯೇಕ ಪಾಲಿಕೆ ಮಾಡಲು ಸಹಕರಿಸಬೇಕು. ಪ್ರತ್ಯೇಕ ಪಾಲಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೇ.15 ರಿಂದ ಹೋರಾಟ ನಡೆಯಲಿದೆ ಎಂದು ಸಭೆಯಲ್ಲಿ ಹೋರಾಟಗಾರರು ಎಂದು ಹೇಳಿದರು.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ ಈಗ ಇರುವ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯನ್ನೇ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಠರಾವು ಪಾಸ್ ಮಾಡಿದ ಬೆನ್ನಲ್ಲೇ ಧಾರವಾಡದ ಸ್ವಾಭಿಮಾನಿಗಳ ವೇದಿಕೆ ಹಾಗೂ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು ಇದೀಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಪಾಲಿಕೆಯಲ್ಲಿ ಠರಾವು ಪಾಸು ಆದ ಬೆನ್ನಲ್ಲೇ ಈಗಾಗಲೇ ಧಾರವಾಡದಲ್ಲಿ ಎರಡೂರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಈ ವಿಷಯವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಅವರ ಗಮನಕ್ಕೆ ತಂದ ಸ್ವಾಭಿಮಾನಿಗಳ ವೇದಿಕೆ ಸದಸ್ಯರು ಅವರೊಂದಿಗೂ ಸಭೆ ನಡೆಸಿದರು.
ಧಾರವಾಡದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಧಾರವಾಡದ ಪಕ್ಷಾತೀತ ನಾಯಕರು, ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟಗಾರರು ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಲಾಡ್ ಅವರೊಂದಿಗೆ ಚರ್ಚೆ ನಡೆಸಿದರು. ಧಾರವಾಡಕ್ಕೆ ಸರ್ಕಾರ ಈಗಾಗಲೇ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿದೆ. ಇದು ರಾಜ್ಯಪಾಲರ ಬಳಿ ಇದ್ದು, ರಾಜ್ಯಪಾಲರು ಇನ್ನೂ ಪ್ರತ್ಯೇಕ ಪಾಲಿಕೆಗೆ ಅಂಕಿತ ಹಾಕಿಲ್ಲ. ಇದರಲ್ಲಿ ರಾಜಕೀಯ ಒತ್ತಡ ಇದ್ದು, ಸಚಿವರು ಈ ಒತ್ತಡವನ್ನು ಬಗೆಹರಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ. ಡಿ. ಹಿರೇಮಠ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ವೆಂಕಟೇಶ ಮಾಚಕನೂರ, ಶಿವಶಂಕರ ಹಂಪಣ್ಣವರ ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.


