“ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿರುವ ಅಂಚೆ ಮತಗಳನ್ನು ತಿದ್ದುವ ಮೂಲಕ ಮರುಎಣಿಕೆಯಲ್ಲಿ ಅಸಿಂಧುಗೊಳಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ಅಪರಾಧ ನಡೆದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಶೃಂಗೇರಿ ಕ್ಷೇತ್ರದ ಮರುಎಣಿಕೆಯ ಬಗ್ಗೆ ಕೇಳಿದಾಗ, “ಚುನಾವಣೆ ಮತ ಎಣಿಕೆ ಸಮಯದಲ್ಲಿ ಪ್ರತಿ ಅಂಚೆ ಮತವನ್ನು ತೆರೆದು ಎರಡೂ ಪಕ್ಷಗಳ ಏಜೆಂಟರು ಹಾಗೂ ಅಧಿಕಾರಿಗಳಿಗೆ ತೋರಿಸಿ ಅದನ್ನು ಮಾನ್ಯ ಮಾಡಿ ಎಣಿಕೆ ಮಾಡಲಾಗಿರುತ್ತದೆ. ಈ ರೀತಿ ಮತ ಎಣಿಕೆ ಮಾಡಿದ ಬಳಿಕ ಬಿಜೆಪಿ ಅಭ್ಯರ್ಥಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳನ್ನು ತಿದ್ದಲಾಗಿದೆ. ಹೀಗಾಗಿಯೇ ಅವರು ನಿರ್ದಿಷ್ಟ ಮತಗಳ ಬಂಡಲ್ ಅನ್ನೇ ಮರು ಎಣಿಕೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಗಂಭೀರ ತನಿಖೆ ನಡೆಯಬೇಕಿದೆ. ಚುನಾವಣಾ ಆಯೋಗವು ಈ ವಿಚಾರದಲ್ಲಿ ನ್ಯಾಯ ಒದಗಿಸಬೇಕಿದೆ. ಇದು ದೇಶದಲ್ಲೇ ಅತಿ ದೊಡ್ಡ ಷಡ್ಯಂತ್ರವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಇಂತಹ ಕೆಲಸದಲ್ಲಿ ಭಾಗಿಯಾಗಿದ್ದು, ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ” ಎಂದು ಕಿಡಿಕಾರಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ ವೋಟ್ ಚೋರಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿ. ಎಣಿಕೆ ಮಾಡಿದ ಬಳಿಕ ಎಲ್ಲಾ ದಾಖಲಾತಿಗಳನ್ನು ಟ್ರಂಕ್ನಲ್ಲಿಡಲಾಗುತ್ತದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲೂ ಆವರ ಸರ್ಕಾರ ಇತ್ತು. ಅವರು ಹೇಳುವ ಪ್ರಕಾರ ಡಬಲ್ ಇಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.


