ಬಿಜೆಪಿ ಸಂಸದ ಗೋವಿಂದ ಕಾರಜೋಳ ಹಾಗೂ ಅಭ್ಯರ್ಥಿ ವೀರಣ್ಣ ಚರಂತಿಮಠ ಇಬ್ಬರು ಜೋಡೆತ್ತಿನ ರೀತಿ ಅಕ್ರಮ ಕೆಲಸ ಮಾಡುವ ಮೂಲಕ ಬಾಗಲಕೋಟೆ ಅಭಿವೃದ್ಧಿಗೆ ಮಾರಕವಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಆರೋಪಿಸಿದರು.
ಬಾಗಲಕೋಟೆಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಗೋವಿಂದ ಕಾರಜೋಳ ತಮ್ಮ ಮಕ್ಕಳಾದ ಗೋಪಾಲ, ಉಮೇಶ, ಅರುಣ ಕಾರಜೋಳರ ಹೆಸರಲ್ಲಿ ಕಡಿಮೆ ಮೊತ್ತಕ್ಕೆ 30 ಎಕರೆ ಜಮೀನು ಖರೀದಿಸಿ 2013ರಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವಂತೆ ಬಿಟಿಡಿಎಗೆ ಪತ್ರ ಬರೆದಿದ್ದಾರೆ. ಬಿಟಿಡಿಎಗೆ ಜಮೀನು ಸ್ವಾಧೀನವಾಗುತ್ತೆ, ಹೆಚ್ಚಿನ ಪರಿಹಾರ ಸಿಗುತ್ತೆ ಅನ್ನುವ ಕಾರಣಕ್ಕೆ ಈ ರೀತಿ ಜಮೀನು ಖರೀದಿಸಿ ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ. ಈ ಮೂಲಕ ಸರಕಾರದ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು.
ಇನ್ನೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಟಿಡಿಎ ದಲ್ಲಿ ಸಾಕಷ್ಟು ಅಕ್ರಮಗಳನ್ನು ಎಸಗಿದ್ದಾರೆ. ಅವರ ಅಕ್ರಮಗಳಿಗೆ, ಕಾನೂನು ಬಾಹಿರ ಕೆಲಸಗಳಿಗೆ ಚೀಪ್ ಎಂಜಿನಿಯರ್ ಒಬ್ಬರು ಅಮಾನತು ಆಗಿರುವುದೇ ಸಾಕ್ಷಿ. ಇದು ಅವರು ಮಾಡಿರೋ ಭ್ರಷ್ಟಾಚಾರ ಅಲ್ಲದೇ ಮತ್ತೇನೂ ಎಂದು ಪ್ರಶ್ನಿಸಸಿದರು.
ಬಾಗಲಕೋಟೆಗೆ ಮಾರಕವಾದ ಕೆಲಸ ಮಾಡೋರು, ಸರಕಾರದ ಹಣ ಲೂಟಿ ಮಾಡುವವರು ಅವರು, ಅಭಿವೃದ್ಧಿ ಕೆಲಸ ಮಾಡಿರುವುದು ನಾವು. ಎಚ್.ಕೆ.ಪಾಟೀಲರು ನೀರಾವರಿ ಮಂತ್ರಿಯಾಗಿದ್ದಾಗ ನಾನು ಜಿಲ್ಲಾಉಸ್ತುವಾರಿ ಸಚಿವನಾಗಿದ್ದೆ. ಆಗ 630 ಕೋಟಿ ರ. ನೀವಾರಿಗೆ ಅನುದಾನ ತಂದಿದ್ದೇವೆ. ಜಿಲ್ಲೆ ಅಭಿವೃದ್ದಿಗಾಗಿ ಸಬ್ ಕಮೀಟಿಯನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಇದು ನಮ್ಮ ಸರಕಾರದ ಬದ್ಧತೆ ಎಂದರು.
ಬಿಜೆಪಿಯವರು ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕೊಡುವ ನಾಟಕ ಮಾಡಿದರು. 24-25 ಲಕ್ಷ ರೂ. ಫಿಕ್ಸ್ ಮಾಡಿ ಮೂರು ಚೆಕ್ ನೀಡಿ ನಾಟಕ ಮಾಡಿದರು. ಆದರೆ ನಾವು ನೀರಾವರಿಗೆ ಎಕರೆಗೆ 40 ಲಕ್ಷ ರೂ. ಖುಷ್ಕಿ ಜಮೀನಿಗೆ 30 ಲಕ್ಷ ರೂ. ಪರಿಹಾರ ನಿಗದಿ ಮಾಡುವ ಮೂಲಕ ಚೆಕ್ ಹಸ್ತಾಂತರ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಮ್ಮಾಪೂರ ತಿಳಿಸಿದರು.
ಬ್ರಿಟಿಷರಿಂದ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಬಾಗಲಕೋಟೆಯಲ್ಲಿ ಡಿಕ್ಟೇಟರ್ ಶಿಪ್ ನಡೆಸುತ್ತಿದ್ದಾರೆ. ವೋಟ್ ಕೇಳೋಕೆ ಹೋದವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಕಾಲೇಜ್ನಲ್ಲಿ ಧ್ವನಿ ಎತ್ತುವವರಿಗೆ ಹಿಂಸೆ ಮಾಡುವುದು, ಪ್ರಮೋಷನ್ ಕಟ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಮ್ಮಾಪೂರ ಆರೋಪಿಸಿದರು.


