ಇಂದು (ಬುಧವಾರ) ರಾತ್ರಿ 12ಕ್ಕೆ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಜಿಬಿಎ, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆಗೆ ಕರಗ ಉತ್ಸವ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿಎಂ, ಡಿಸಿಎಂ ಕರಗದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, 15 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 24ರಿಂದ ಆರಂಭವಾಗಿರುವ ಕರಗ ಉತ್ಸವದಲ್ಲಿ ಇಂದು ಕರಗ ಶಕ್ತ್ಯೋತ್ಸವ, ಮಲ್ಲಿಗೆ ಹೂವಿನಿಂದ ಅಲಂಕರಿಸಿದ ಕರಗವನ್ನು 16ನೇ ಬಾರಿಗೆ ಕರಗ ಪೂಜಾರಿ ಜ್ಞಾನೇಂದ್ರ ಹೊರಲಿದ್ದಾರೆ. ರಾತ್ರಿ 12ರ ಬಳಿಕ ಆರಂಭವಾಗುವ ಕರಗ ಉತ್ಸವ ಬೆಳಿಗ್ಗೆವರೆಗೆ ನಡೆಯಲಿದೆ. ಸಂಜೆ ಕಬ್ಬನ್ ಪಾರ್ಕ್ನಲ್ಲಿರುವ ಕರಗದಗುಂಟೆಯಲ್ಲಿ ಪೂಜೆ ನಡೆದ ಬಳಿಕ ಬಂದ ನಂತರ ಕರ್ಪೂರ ಸೇವೆ ನಡೆಯಲಿದೆ. ಸಾವಿರಾರು ಕೆ.ಜಿ ಕರ್ಪೂರ ಸೇವೆಯನ್ನ ಭಕ್ತರು ನೆರವೇರಿಸಿದ ಬಳಿಕ ಬಳೆ ಶಾಸ್ತ್ರ ನಡೆಯಲಿದೆ. ಅದೆಲ್ಲ ಮುಗಿದ ಬಳಿಕ ತಾಯಿಯನ್ನು ಆಹ್ವಾನ ಮಾಡಿಕೊಂಡು ಹೂವಿನ ಕರಗದ ದರ್ಶನ ಭಕ್ತರಿಗೆ ತಡರಾತ್ರಿ ಸಿಗಲಿದೆ.
ಕಬ್ಬನ್ ಪೇಟೆಯ ಗಲ್ಲಿಗಳು, ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಮೈಸೂರು ಬ್ಯಾಂಕ್ ಸರ್ಕಲ್ನ ಆಂಜನೇಯ ದೇವಾಲಯ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ಸೇರಿದಂತೆ ಒಟ್ಟು 26 ದೇವಾಲಯಗಳಿಗೆ ಕರಗ ದರ್ಶನವಾಗಲಿದೆ. ಬೆಳಗಿನಜಾವ ಕರಗ ಧರ್ಮರಾಯದೇವಾಲಯ ತಲುಪಲಿದೆ.


