ಮೂರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷನನ್ನು (1) ಬಾವಿಗೆ ತಳ್ಳಿ ಬಳಿಕ ತಾನೂಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ಬಸ್ ಚಾಲಕ ಪತಿ ಶಂಕರಪ್ಪ ಕೆಲಸಕ್ಕೆ ಹೋಗಿದ್ದಾಗ ಪತ್ನಿ ರಾಜಶ್ರೀ ಮಕ್ಕಳೊಂದಿಗೆ ಈ ಕೃತ್ಯ ಎಸಗಿದ್ದು, ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಬಾವಿಯಿಂದ ನಾಲ್ವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಮಕ್ಕಳ ಸಾವಿಗೆ ಪತ್ನಿ ರಾಜಶ್ರೀಯೇ ಕಾರಣವೆಂದು ಪತಿ ಶಂಕ್ರಪ್ಪ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜಶ್ರೀಯ ತವರು ಮನೆಯವರು ಇದು ಆತ್ಮಹತ್ಯೆ ಪ್ರಕರಣವೆಂದು ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ವಿಚಾರವೇ ಈ ದುರಂತಕ್ಕೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಇಂಡಿ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಲಕನಿಂದ ಡಬಲ್ ಮರ್ಡರ್
ಪೀಣ್ಯದ ಹೆಚ್ಎಂಟಿ ಲೇಔಟ್ನ ಮನೆಯೊಂದರಲ್ಲಿ 16 ವರ್ಷದ ಬಾಲಕನಿಂದ ಅಕ್ರಮ ಸಂಬಂಧ ಪ್ರಶ್ನಿಸಲು ಬಂದಿದ್ದ ಅಕ್ಕ ಮತ್ತು ತಮ್ಮನನ್ನು ಹತ್ಯೆ ಮಾಡಿದ್ದಾನೆ. ಯಮುನಾ(36) ಮತ್ತು ಸುದೀಪ್(34) ಹತ್ಯೆಯಾದವರು. ಸ್ಥಳಕ್ಕೆ ಡಿಸಿಪಿ ನಾಗೇಶ್, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆರೋಪಿಯ ತಾಯಿ ಛಾಯಾ ಹಾಗೂ ಯುಮುನಾ ಗಂಡನ ಮಧ್ಯೆ ಅಕ್ರಮ ಸಂಬಂಧವಿತ್ತು, ಇದನ್ನು ಪ್ರಶ್ನಿಸಲು ಛಾಯಾ ಮನೆಗೆ ಬಂದಿದ್ದ ಯಮುನಾ ಮತ್ತು ತಮ್ಮ ಸುದೀಪ್ ಜಗಳವಾಡುತ್ತಿದ್ದರು. ಛಾಯಾ ಅವರ ಪುತ್ರ ಚಾಕುವಿನಿಂದ ಇರಿದು ಇಬ್ಬರನ್ನು ಕೊಲೆ ಮಾಡಿದ್ದಾನೆ.
ಬಾಲಕ ಇಬ್ಬರಿಗೂ ಹತ್ತಾರು ಬಾರಿ ಚಾಕುವಿನಿಂದ ಇರಿದು ಕೋಣೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆಗೆದಿರಲಿಲ್ಲ. ತಂದೆ ಬಂದು ಹೇಳಿದಾಗ ಬಾಗಿಲು ತೆಗೆದು ಹೊರಬಂದಿದ್ದಾನೆ.


