ತುಮಕೂರಿನಲ್ಲಿ ನಡೆದಿರುವ ಲಾಕಪ್ ಡೆತ್ ಕೇಸ್ನ ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಗುರುವಾರ ವಿಚಾರಣೆ ಮಾಡುವಾಗಲೇ ವ್ಯಕ್ತಿಯ ಸಾವು ಆಗಿದ್ದು, ಕಾರಣವೇನು ಎಂಬುದು ಗೊತ್ತಾಗಿಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ.
ಹಲ್ಲೆ ಮಾಡಿದ್ದಕ್ಕೆ ಸಾವು ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದ್ದು, ಹೊಡೆದಿದ್ದರೂ ಸಿಐಡಿ ತನಿಖೆ, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಎಲ್ಲ ಘಟನೆಗಳ ಬಗ್ಗೆ ತನಿಖೆ ಮಾಡಿ ಸಿಐಡಿ ವರದಿ ಕೊಡಲಿದೆ. ಹಲ್ಲೆಯಿಂದ ಸಾವು ಆಗಿದ್ದರೆ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ತುಮಕೂರಿನ ಹುಳಿಯಾರು ಠಾಣೆಯಲ್ಲಿ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಮೃತನನ್ನು ಕಾಂತರಾಜು (45) ಎಂದು ಗುರುತಿಸಲಾಗಿದೆ. ಇಸ್ಪೀಟ್ ಆಡ್ತಿದ್ದ ಆರು ಮಂದಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಠಾಣೆಯಲ್ಲಿ ಕಾಂತರಾಜು ಮೃತಪಟ್ಟಿದ್ದರು. ಗ್ರಾಮಸ್ಥರು ಹುಳಿಯಾರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಠಾಣೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಎಸ್ಪಿ ಅಶೋಕ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡಲು ಹೋಗಿ ಮಕ್ಕಳು ಮೃತಪಟ್ಟ ಬಗ್ಗೆ ಪ್ರತಿಕ್ರಿಯಿಸಿ, ಯುವಕರು ವ್ಹೀಲಿಂಗ್ , ರೀಲ್ಸ್ ಮಾಡಲು ಹೋಗ್ತಾರೆ. ಹಾಗೆ ಮಾಡಬಾರದು ಅಂತ ಕಂಟ್ರೋಲ್ ಮಾಡಿದರೂ ಪೊಲೀಸ್ ಕಣ್ತಪ್ಪಿಸಿ ಹೋಗಿ ಹೀಗೆ ಮಾಡಿಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾನಿಟರ್ ಮಾಡಿದ್ದೇವೆ. ಬೆಳಗಿನ ಜಾವ ಹೋಗಿ ವ್ಹೀಲಿಂಗ್ ಮಾಡ್ತಾರೆ. ಇದನ್ನು ಮಾನಿಟರ್ ಮಾಡಲು ಪೊಲೀಸರಿಗೆ ಕಷ್ಟ ಆಗುತ್ತದೆ. ಅವರಿಗೆ ಎಜುಕೇಟ್ ಮಾಡಲು ಪೊಲೀಸ್ ಪ್ರಯತ್ನ ಮಾಡ್ತಾರೆ ಎಂದು ತಿಳಿಸಿದರು.


