ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಇಜೆ ಗ್ರಾಮದ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ದೇವೇಂದ್ರಪ್ಪ ಸ್ವಾಮಿ (58) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದೇವೇಂದ್ರಪ್ಪ ಸ್ವಾಮಿ ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಕಟ್ಟಿದ್ದರು. ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದ ಅವರು ಜೀವನದಲ್ಲಿ ವೈರಾಗ್ಯ ಬಂದು ಮಠ ಕಟ್ಟಿಕೊಂಡಿದ್ದರು. ಶಾಲಾ ಅವಧಿ ಬಳಿಕ ಸಂಜೆ ಮಠದಲ್ಲಿ ಧಾರ್ಮಿಕ ಪ್ರವಚನ ಮಾಡುತ್ತಿದ್ದರು.
ಸ್ವಾಮೀಜಿ ಗದಗದ ಗಜೇಂದ್ರಗಡದ ಗುಳಗುಳಿ ಗ್ರಾಮದವರು. 20 ವರ್ಷದಿಂದ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿದ್ದರು. ಕುಟುಂಬದಿಂದ ದೂರ ಉಳಿದ್ದರು. ದೇವೇಂದ್ರಪ್ಪ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಠದ ಭೋಜನಾ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


