ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡಲು ಐದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಈ ಕಾರ್ಯಾಚರಣೆ ನಡೆಸಿದೆ.
ಶಾಸಕ ಚಂದ್ರು ಲಮಾಣಿಗೆ ಸೇರಿದ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಶಾಸಕ ಚಂದ್ರು ಲಮಾಣಿ ಮತ್ತು ಇಬ್ಬರು ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ, ಗುರು ಲಮಾಣಿಯನ್ನು ವಶಕ್ಕೆ ಪೆದುಕೊಂಡಿದೆ.
ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ ಒಂದು ಕೋಟಿ ಮೊತ್ತದ ಕಾಮಗಾರಿಗೆ ಶಾಸಕರು ಕ್ಲಾಸ್-1 ಗುತ್ತಿಗೆದಾರ ವಿಜಯ ಪೂಜಾರ ಎನ್ನುವವರ ಬಳಿ 11 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು, ಮೊದಲ ಹಂತದ ಹಣವಾಗಿ 5 ಲಕ್ಷ ರೂ. ಪಡೆಯುವಾಗ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ಬಲೆಗೆ ಬಿದ್ದಿದ್ದಾರೆ. ಮೂವರು ಬಂಧಿತರನ್ನು ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲು ತಯಾರಿ ನಡೆಸಿದ್ದಾರೆ.


