ಯಾದಗಿರಿ ಜಿಲ್ಲೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ. ಮದ್ಯದ ಅಮಲಿನಲ್ಲಿ ಹೆತ್ತ ತಾಯಿ ಮಗಳ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಮೃತ ಬಾಲಕಿಯನ್ನು ಪ್ರತಿಭಾ (10) , ಆರೋಪಿ ತಾಯಿ ನಿರ್ಮಲಾ ಎಂದು ಗುರುತಿಸಲಾಗಿದೆ. ಮಗಳು ತಾಯಿಗೆ ಮದ್ಯಪಾನ ಬಿಡುವಂತೆ ಬುದ್ಧಿವಾದ ಹೇಳಿದ್ದೇ ಈ ಘೋರ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿ ನಿರ್ಮಲಾ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುತ್ತಮುತ್ತಲಿನವರಿಗೆ ಮತ್ತು ಪೊಲೀಸರಿಗೆ ನಂಬಿಸಲು ಯತ್ನಿಸಿದ್ದಾಳೆ. ಜ್ಯೂಸ್ ಕುಡಿಯಲು 15 ರೂಪಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗಳು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಕಥೆ ಹೇಳಿದ್ದಳು.
ಮನೆ ಒಳಗೆ ಬಾಲಕಿ ಸೀರೆ ಕಟ್ಟಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿತ್ತು. ಆದರೆ ಅನುಮಾನಾಸ್ಪದ ಅಂಶಗಳು ಕಂಡುಬಂದ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಿದ್ದರು.
ಪೊಲೀಸರ ತೀವ್ರ ವಿಚಾರಣೆ ಮತ್ತು ವೈದ್ಯಕೀಯ ತಪಾಸಣೆಯ ನಂತರ, ಇದು ಕೊಲೆ ಎಂಬುದು ಬಯಲಾಗಿದೆ. ಕುತ್ತಿಗೆಯಲ್ಲಿ ಉಸಿರುಗಟ್ಟಿದ ಗುರುತುಗಳು ಪತ್ತೆಯಾಗಿದ್ದು, ಕೈಗಳಿಂದಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಪೊಲೀಸರ ವಿಚಾರಣೆಯಲ್ಲಿ ಕೊನೆಗೆ ತಾಯಿ ನಿರ್ಮಲಾ ತಪ್ಪು ಒಪ್ಪಿಕೊಂಡಿದ್ದಾಳೆ.


