Wednesday, February 04, 2026
Menu

‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಹಾವನೂರು ಕಾರ್ಣಿಕೋತ್ಸವ ದೈವವಾಣಿ

‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂದು ಹಾವನೂರು ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವದಲ್ಲಿ ಆನಂದ ಬಿಲ್ಲರ ಹೆಸರಿನ ಗೊರವಯ್ಯ ದೈವವಾಣಿ ನುಡಿದಿದ್ದಾರೆ.

‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂಬ ದೈವವಾಣಿಯನ್ನು ಪ್ರಸ್ತಕ ವರ್ಷ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆಯಾಗುತ್ತಿದೆ. ಹೆಚ್ಚಿನ ಲಾಭ ಗಳಿಸಲಿದ್ದಾರೆ ಎಂಬ ಸೂಚನೆ ಎಂದು ಅರ್ಥೈಸಿಕೊಳ್ಳಲಾಗಿದೆ. ಹಾವನೂರು ಗ್ರಾಮದ ಜೋಗನ ಮರಡಿಯಲ್ಲಿ 12 ಅಡಿ ಎತ್ತರದ ಬಿಲ್ಲನೇರಿದ ಆನಂದ ಬಿಲ್ಲರ ಗೊರವಯ್ಯ ಮೈಮೇಲೆ ದೇವರೇ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಎಂಬುದು ಭಕ್ತರ ನಂಬಿಕೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ ಕಳೆದ ಅಕ್ಟೋಬರ್‌ನಲ್ಲಿ ನಡೆದಿತ್ತು. ಗೊರವಯ್ಯ ನಾಗಪ್ಪಜ್ಜ ಉರ್ಮಿ, ‘ನಾಡಿನ ಬಂಗಾರದ ಗಿಂಡಿ ನಾಡೆಲ್ಲಾ ಸಂಪಾದಿತಲೇ ಪರಾಕ್’​ ಎಂದು ನುಡಿದಿದ್ದರು.

ಹಾವನೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನ ಬಳಿಕ ಗೊರವಯ್ಯ 15-20 ಅಡಿ ಎತ್ತರ ಬಿಲ್ಲನ್ನು ಏರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿ ಬಿತ್ತರಿಸಿದರು. ಒಂದೇ ವಾಕ್ಯದ ವರ್ಷ ಭವಿಷ್ಯವನ್ನು ಹೇಳಿ ಮೇಲಿಂದ ಗೊರವಪ್ಪ ಆನಂದ ಬಿಲ್ಲರ ಪೂರ್ವ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುವುದೆಂಬ ನಂಬಿಕೆ ಭಕ್ತರದು.

ರೈತರಿಗೆ ಈ ವರ್ಷ ಉತ್ತಮವಾಗಿದೆ, ರೈತನಿಗೆ ಲಾಭವಾಗಲಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಆಗುವುದು ಎಂದು ಭಕ್ತರು ದೈವವಾಣಿಯನ್ನು ಅರ್ಥೈಸಿಕೊಂಡರೆ. ರಾಜಕೀಯ ಪಕ್ಷದಲ್ಲಿ ಕಷ್ಟಪಟ್ಟು ದುಡಿದ ವ್ಯಕ್ತಿಗೆ ಈ ವರ್ಷ ಅಧಿಕಾರ ದೊರೆಯುವುದು. ಪಕ್ಷಗಳಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದವರಿಗೆ ಉನ್ನತ ಹುದ್ದೆಗಳು ಲಭಿಸುವುದು, ಕಷ್ಟಪಟ್ಟವರಿಗೆ ಒಂದಲ್ಲ ಒಂದು ದಿನ ಅಧಿಕಾರ ದೊರೆಯುತ್ತದೆ ಎಂಬುದು ಈ ವರ್ಷ ಸತ್ಯವಾಗಲಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

Related Posts

Leave a Reply

Your email address will not be published. Required fields are marked *