ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ಗೆ ಪತ್ರ ಬರೆದಿದ್ದಾರೆ. ಈ ಘಟನೆ ದೇಶದ ತೆರಿಗೆ ಆಡಳಿತದ ಮೇಲೆ ಕಪ್ಪು ಚುಕ್ಕೆಯಾಗಿದ್ದು, ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ನಿಷ್ಪಕ್ಷಪಾತ ತನಿಖೆ ಅನಿವಾರ್ಯ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಈಗಾಗಲೇ ಎಸ್ಐಟಿಗೆ ವಹಿಸಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಜನವರಿ 30ರಂದು ಆದಾಯ ತೆರಿಗೆ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯ ಮಧ್ಯೆ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿ.ಜೆ. ರಾಯ್ ಅಸಹಜ ಮರಣದ ಬಗ್ಗೆ ಕೇರಳದ ಜನರ ದುಃಖವನ್ನು ಹಂಚಿಕೊಳ್ಳಲು ಈ ಪತ್ರ ಬರೆಯುತ್ತಿದ್ದೇನೆ. ಈ ಘಟನೆಯಿಂದ ಉದ್ಯಮ ಸಮುದಾಯ ಮತ್ತು ನಾಗರಿಕ ಸಮಾಜ ಆಘಾತಕ್ಕೊಳಗಾಗಿದೆ. ಈ ದುರದೃಷ್ಟಕರ ಘಟನೆ ದೇಶದ ತೆರಿಗೆ ಆಡಳಿತದ ಮೇಲೆ ಒಂದು ಕಪ್ಪು ಚುಕ್ಕೆ ಎಂದು ನಾನು ಭಾವಿಸಿದ್ದೇನೆ ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ತಿಳಿಸಿದ್ದಾರೆ. .
ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬಂದೂಕನ್ನು ಹಿಡಿದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ. ಕಾರ್ಯಾಚರಣೆಗಳು ನಡೆಯುತ್ತಿರುವ ಸ್ಥಳ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು ಮತ್ತು ಪರಿಶೀಲನೆ ಸುರಕ್ಷಿತವಾಗಿರಬೇಕು. ಯಾವುದೇ ಶೋಧ ಕಾರ್ಯಾಚರಣೆಯಲ್ಲಿ ಸರ್ಚ್ ವಾರಂಟ್ ಹೊರಡಿಸಲಾದ ವ್ಯಕ್ತಿಯು ಅಧಿಕಾರಿಗಳು ಶೋಧ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿರಬೇಕು. ಕನಿಷ್ಠ ಇಬ್ಬರು ಸ್ವತಂತ್ರ ಸಾಕ್ಷಿಗಳು ಇರಬೇಕು. ಈ ಪ್ರಕರಣದಲ್ಲಿ ಶೋಧ ನಡೆಯುತ್ತಿರು ವಾಗಲೇ ರಾಯ್ ಮತ್ತೊಂದು ಕೋಣೆಗೆ ತೆರಳಿ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂಬುದು ಮಾಧ್ಯಮ ವರದಿ. ಇದು ಸತ್ಯವೇ ಆಗಿದ್ದರೆ, ಇದೊಂದು ಗಂಭೀರ ಲೋಪ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಸಿ.ಜೆ.ರಾಯ್ ಅವರರು ಸಹೋದರನಲ್ಲಿ ಅಧಿಕಾರಿಗಳಿಂದ ಕಿರುಕುಳದ ಬಗ್ಗೆ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕು. ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವುದು ಅತ್ಯ ಗತ್ಯ. ಈ ವಿಷಯದಲ್ಲಿ ಅತ್ಯುತ್ತಮ ಆಯ್ಕೆಯೆಂದರೆ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವುದು. ಯಾವುದೇ ವಿಳಂಬವಿಲ್ಲದೆ ನ್ಯಾಯಾಂಗ ತನಿಖೆ ಮತ್ತು ಕಾಲಮಿತಿಯೊಳಗೆ ಸಮಗ್ರ ವರದಿ ಪಡೆಯಬೇಕು ಎಂದು ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.


