ಹಿಂದುಳಿದವರು ಸಂಘಟಿಸಿದರೆ ಜಾತೀಯತೆಯಾಗುವುದಿಲ್ಲ. ಉಪಜಾತಿಗಳಲ್ಲಿ ವಿಭಜಿಸದೇ ಒಂದೇ ಶಕ್ತಿಯಾಗಿ ಸಂಘಟಿತರಾಗಿ ಎಂದು ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ದೇವಾಂಗ ಸಂಘದಿಂದ ವತಿಯಿಂದ ಆಯೋಜಿಸಲಾಗಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇವಾಂಗ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ನೂರು ವರ್ಷಗಳನ್ನು ಪೂರೈಸುವುದು ಮೈಲಿಗಲ್ಲು ಸಾಧನೆಯಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯ, ವ್ಯವಸ್ಥೆ ಒದಗಿಸಲಾಗುತ್ತಿರುವುದು ಸಂತಸದ ವಿಚಾರ ಎಂದರು.
ಮಹಿಳೆಯರು ಹಾಗೂ ಶೋಷಿತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಪ್ರಸ್ತುತ ಲಿಂಗ ತಾರತಮ್ಯ ನೀಗುತ್ತಿದ್ದು, ಸಂಘದವರು ಮಹಿಳಾ ಸಬಲೀಕರಣಕ್ಕೆ ನೆರವು ನೀಡುತ್ತಿದೆ. ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ನೀಡುವ ಭರವಸೆ ನೀಡಿದರು.
ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ಸಾಧಿಸುವುದು ನಮ್ಮ ಸರ್ಕಾರದ ಧ್ಯೇಯ. ಶ್ರೀಮಂತ ಇತಿಹಾಸವಿರುವ ಈ ಸಮುದಾಯದವರು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದೆ. ರೈತರು ಆಹಾರ ಪೂರೈಸಿದಂತೆ, ನೇಕಾರರು ಬಟ್ಟೆಯನ್ನು ತಯಾರಿಸುತ್ತಾರೆ. ಈ ಸಮುದಾಯದ ಸಂಘಟನೆಯಾಗುವುದು ಅಗತ್ಯ. ಸಂಘಟನೆಯ ಮೂಲಕವೇ ಶಕ್ತಿ ಬೆಳೆಯುತ್ತದೆ. ಹಿಂದುಳಿದವರು ಸಂಘಟಿಸಿದರೆ ಜಾತಿಯತೆಯಾಗುವುದಿಲ್ಲ ಎಂದು ಸಮಾಜ ಚಿಂತಕರು ಲೋಹಿಯಾ ಹೇಳಿದ್ದಾರೆ. ಶಿಕ್ಷಣದಿಂದ ವಂಚಿತರಾಗಿರುವುದರಿಂದ ಸಮಾಜದಲ್ಲಿ ಅಸಮಾನತೆಯಿದೆ. ಬಸವಾದಿ ಶರಣರು ಸಮಾಜದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರು.ಡಾ.ಬಿ.ಆರ್.ಅಂಬೇಡ್ಕರ್ ಅವರು, ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,ರಾಜಕೀಯ ಸ್ವಾತಂತ್ರ್ಯದಿಂದ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ನುಡಿದಿರುವುದಾಗಿ ಸಿಎಂ ಸ್ಮರಿಸಿದರು.
ದೇವಾಂಗ ಸಮುದಾಯದಲ್ಲಿರುವ ಎಲ್ಲ ಉಪಜಾತಿಗಳನ್ನು ತೆಗೆಯಬೇಕು. ಸಮುದಾಯದಲ್ಲಿ ಹಲವು ಗುಂಪುಗಳಿದ್ದರೂ, ಒಂದೇ ಶಕ್ತಿಯಾಗಿ ಸಂಘಟಿತರಾಗಿ , ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಸಮಾಜದಲ್ಲಿ ಸಾಕ್ಷರತೆ ಶೇ.76 ರಷ್ಟಿದ್ದು, ಮಹಿಳೆಯರಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ಸಮುದಾಯದ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು. ಜಾತಿವ್ಯವಸ್ಥೆಯಿಲ್ಲದ ಸಮಾಜವನ್ನು ನಿರ್ಮಿಸುವುದೇ ಸಂವಿಧಾನದ ಆಶಯವಾಗಿದೆ. ಎಲ್ಲ ಜಾತಿಧರ್ಮದವರು ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕು. ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆಯಿರಿ ಎಂದು ತಿಳಿಸಿದರು.
2004-05 ರಲ್ಲಿ ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ನೇಕಾರರಿಗೆ ತಲಾ ಯೂನಿಟ್ ಗೆ 4.20 ರೂ. ಇದ್ದ ವಿದ್ಯುತ್ ದರವನ್ನು 1.20 ರೂ.ಗಳಿಗೆ ಕಡಿತಗೊಳಿಸಲಾಗಿತ್ತು. ಈ ಯೋಜನೆಯ ಲಾಭವನ್ನು ಸಮುದಾಯದ ಶೇ.80 ರಷ್ಟು ಜನರಿಗೆ ನೆರವಾಗಿತ್ತು. ಪ್ರಸ್ತುತ ನೇಕಾರರಿಗೆ 20 ಹೆಚ್ ಪಿವರೆಗೆ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ನೀಡಲಾಗುತ್ತಿದೆ. ಶೂನ್ಯಬಡ್ಡಿ ದರದಲ್ಲಿ 5 ಲಕ್ಷರೂ.ವರೆಗೆ ಸಾಲ ವ್ಯವಸ್ಥೆ, ನೇಕಾರ ಸಮ್ಮಾನ ಯೋಜನೆ, ದೇವರದಾಸಿಮಯ್ಯ, ವಚನಕಾರರ ಜಯಂತಿ ಯನ್ನು ಪ್ರಾರಂಭಿಸಿದ್ದು ನಮ್ಮ ಸರ್ಕಾರ. ಸಮುದಾಯದ ಜನಪ್ರತಿನಿಧಿಗಳನ್ನು ಶಾಸಕರು ಮತ್ತು ಎಂಎಲ್ ಸಿ ಗಳಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಜಮೀನು ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆಯಿದ್ದು, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.


