ಬೆಂಗಳೂರು: ಡಿಸೆಂಬರ್ 24 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿಗೆ ಪ್ರಕಟಿಸಲಾದ ಕರ್ನಾಟಕ ತಂಡದಲ್ಲಿ ಸ್ಟಾರ್ ಆಟಗಾರರಾದ ಕೆ.ಎಲ್.ರಾಹುಲ್, ಪ್ರಸಿದ್ಧ ಕೃಷ್ಣ ಸೇರಿ ಪ್ರಮುಖ ಆಟಗಾರರಿಗೆ ಸ್ಥಾನ ನೀಡಲಾಗಿದೆ.
ಡಿಸೆಂಬರ್ 24 ರಿಂದ ಪ್ರಾರಂಭವಾಗಲಿರುವ ಟೂರ್ನಿ ಮುಂದಿನ ವರ್ಷ ಜನವರಿ 18 ರವರೆಗೆ ದೇಶದ ವಿವಿಧ ನಗರಗಳಲ್ಲಿ ಜನವರಿ 8ರ ವರೆಗೆ ನಡೆಯಲಿದೆ. ಕ್ವಾರ್ಟರ್ ಫೈನಲ್ಸ್ ಪಂದ್ಯ ಜನವರಿ 12 ರಂದು ಮತ್ತು ಸೆಮಿಫೈನಲ್ ಜನವರಿ 15 ರಂದು ನಡೆಯಲಿದೆ. ಸರಣಿಯ ಫೈನಲ್ ಪಂದ್ಯವು ಜನವರಿ 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಸರಣಿಯಲ್ಲಿ, ಮಧ್ಯಪ್ರದೇಶ, ಮುಂಬೈ, ದೆಹಲಿ, ಕೋಲ್ಕತ್ತಾ, ಕರ್ನಾಟಕ ಮತ್ತು ಕೇರಳ ಸೇರಿದಂತೆ ಒಟ್ಟು 32 ತಂಡಗಳು ಭಾಗಿಯಾಗುತ್ತಿದ್ದು ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಕರ್ನಾಟಕ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಪ್ರಕಟಿಸಿದ 16 ಸದಸ್ಯರ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು, ಕರುಣ್ ನಾಯರ್ ತಂಡದ ಉಪನಾಯಕ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕರುಣ್ ನಾಯರ್ ಈ ಹಿಂದೆ ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕರಾಗಿದ್ದರು ಎಂಬುದು ಗಮನಾರ್ಹ.
ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ ಸಹ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ವಿದ್ವತ್ ಕಾವೇರೆಪ್ಪ ಹಾಗೂ ವಿದ್ಯಾಧರ್ ಪಟೇಲ್ ಅವರಿಗೆ ಈ ತಂಡದಲ್ಲಿ ಅವಕಾಶ ಸಿಗಲಿಲ್ಲ. 2027ರ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರು ದೇಶೀಯ ಪಂದ್ಯಗಳಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಬಿಸಿಸಿಐ ಆದೇಶ ಹೊರಡಿಸಿರುವ ಹಿನ್ನೆಲೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಂತಹ ಸ್ಟಾರ್ ಆಟಗಾರರು ತಮ್ಮ ತವರು ರಾಜ್ಯದ ತಂಡಗಳಿಗಾಗಿ ದೇಶಿ ಪಂದ್ಯಾವಳಿಗಳನ್ನು ಆಡಲು ಸಜ್ಜಾಗಿದ್ದಾರೆ. ಏತನ್ಮಧ್ಯೆ, ಡಿಸೆಂಬರ್ 24 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಮೊದಲ ಎದುರಾಳಿಯಾಗಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಕರ್ನಾಟಕ ತಂಡ:
ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್ (ಉಪನಾಯಕ), ಸ್ಮರಣ್ ಆರ್, ಶ್ರೀಜಿತ್ ಕೆ.ಎಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವೈಶಾಕ್ ವಿ, ಮನ್ವಂತ್ ಕುಮಾರ್ ಎಲ್, ಶ್ರೀಶ ಎಸ್ ಆಚಾರ್, ಅಭಿಲಾಷ್ ಶೆಟ್ಟಿ, ಶರತ್ ಬಿ.ಆರ್, ಹರ್ಷಿಲ್ ಧರ್ಮಾನಿ, ಧೃವ್ ಪ್ರಭಾಕರ್, ಕೆ.ಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ.
ಎ ಗುಂಪು – ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಪುದುಚೇರಿ, ತ್ರಿಪುರ, ಕೇರಳ.


