ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರ್ಘಟನೆ ಬಳಿಕ ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳು ಈ ಕ್ರೀಡಾಂಗಣದಿಂದ ಸ್ಥಳಾಂತರವಾಗಿರುವ ಬಗ್ಗೆ ಕೇಳಿದಾಗ, “ಇದು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಮಹಿಳಾ ಟಿ 20 ವಿಶ್ವಕಪ್ ಪಂದ್ಯಗಳ ಬಗ್ಗೆ ಕೇಳಿದಾಗ, ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿದರು.
ಕೆಎಸ್ ಸಿಎ ಚುನಾವಣೆಯಲ್ಲಿ ಮತದಾನ ಮಾಡಿರುವ ಬಗ್ಗೆ ಕೇಳಿದಾಗ, ನಾನು ಕೆಎಸ್ ಸಿಎ ಸದಸ್ಯ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ, ನಾಗರಾಜ್ ಅವರು ನನಗೆ ಸದಸ್ಯತ್ವ ನೀಡಿದರು. ಅವರ ಮಗ ನನ್ನ ಸಹಪಾಠಿ. ನನಗೆ ಬ್ರಿಜೇಶ್ ಪಟೇಲ್ ಅವರಿಂದ ಅನಿಲ್ ಕುಂಬ್ಳೆ, ಪ್ರಸನ್ನ ಸೇರಿದಂತೆ ಅನೇಕರು ಬಹಳ ಪರಿಚಯ. ನನಗೆ ಬೇಕಾದವರಿಗೆ ನಾನು ಮತ ಹಾಕಿದ್ದೇನೆ ಎಂದು ಉತ್ತರಿಸಿದರು.
ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚೆಗೆ ಆಗಿರುವ ಅನಾಹುತ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು. ಇದರ ಜೊತೆಗೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.


