ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನಿವಾಸದಲ್ಲಿ ಪತ್ತೆಯಾಗಿದ್ದ 82 ಲಕ್ಷ ರೂ. ಹಣವನ್ನು ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ನೀಡಿ ನ್ಯಾಯಾಲಯು ಆದೇಶಿಸಿದೆ.
ವಶಪಡಿಸಿಕೊಂಡ ಹಣ ವಾಪಸ್ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ, ಆದಾಯ ತೆರಿಗೆ ಇಲಾಖೆ ವಶದಲ್ಲಿಯೇ ಇರುವಂತೆ ಸೂಚಿಸಿದೆ.
ತನಿಖೆ ವೇಳೆ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಮನೆ ಮತ್ತು ಪ್ರದೋಷ್ ಮನೆಯಲ್ಲಿ ಹಣ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದರು. ತನಿಖೆ ನಡೆಸಿದ ಐಟಿ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ದರ್ಶನ್ 82 ಲಕ್ಷ ರೂ. ಹಣ ವಾಪಸ್ ನೀಡಲು ಕೋರ್ಟ್ಗೆ ಮನವಿ ಮಾಡಿದ್ದರು.
ದರ್ಶನ್ ಅರ್ಜಿಗೆ ಆಕ್ಷೇಪಣೆ ಎತ್ತಿದ ಐಟಿ ದರ್ಶನ್ ಇದೂವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ತನಿಖೆ ಮುಂದುವರೆಸಬೇಕಾಗಿದೆ ಎಂದಿತ್ತು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ 82 ಲಕ್ಷ ಹಣ ಐಟಿ ಬಳಿಯಲ್ಲೇ ಇರಲಿ, ತನಿಖೆ ಮುಂದುವರೆಸಲಿ ಎಂದು ಆದೇಶ ನೀಡಿದೆ.
ಹಣ ದರ್ಶನ್ ಮನೆಗೆ ಹೇಗೆ ಬಂತು ಎನ್ನುವುದಕ್ಕೆ ದರ್ಶನ್ ಪರ ವಕೀಲರು ವಾದಿಸಿದ್ದರು. ದರ್ಶನ್ ಅವರು ಮೋಹನ್ ರಾಜ್ಗೆ ಸಾಲವಾಗಿ ಹಣ ನೀಡಿದ್ದರು. ಮೋಹನ್ ರಾಜ್ ಅವರು ದರ್ಶನ್ಗೆ ಮರಳಿಸಿದ್ದರು. ದರ್ಶನ್ ಇದನ್ನು ಮನೆಯಲ್ಲಿಟ್ಟಿದ್ದರು ಎಂದು ದರ್ಶನ್ ವಕೀಲರು ಹೇಳಿದ್ದರು. ಇದಕ್ಕೆ ಆದಾಯ ತೆರಿಗೆ ಇಲಾಖೆ ದರ್ಶನ್ ಈ ಹಣಕ್ಕೆ ಸೂಕ್ತ ದಾಖಲೆಯನ್ನು ಸಲ್ಲಿಕೆ ಮಾಡಿಲ್ಲ. ಇದು ವಂಚನೆಯ ಹಣ ಎಂದು ವಾದಿಸಿತ್ತು.


