ಢಾಕಾದಲ್ಲಿ ನಡೆದ ಭಾರತ ಮಹಿಳಾ ಕಬಡ್ಡಿ ತಂಡ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಜಯವನ್ನು ತನ್ನದಾಗಿಸಿಕೊಂಡು ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿ ಭಾರತವು ಚೈನೀಸ್ ತೈಪೆ ವಿರುದ್ಧ 35-28 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
11 ತಂಡಗಳು ಪಾಲ್ಗೊಂಡಿದ್ದ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಫೈನಲ್ನಲ್ಲೂ ಜಯಭೇರಿ ಬಾರಿಸಿ 13 ವರ್ಷಗಳ ಬಳಿಕ ನಡೆದ ಟೂರ್ನಿಯಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಮೊದಲ ಆವೃತ್ತಿಯು 2012ರಲ್ಲಿ ಭಾರತದಲ್ಲೇ ನಡೆದಿತ್ತು.
ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. 2025 ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಅವರು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆ ಪ್ರದರ್ಶಿಸಿದ್ದಾರೆ. ಅವರ ಗೆಲುವು ಅಸಂಖ್ಯಾತ ಯುವಕರಿಗೆ ಕಬಡ್ಡಿ ಮುಂದುವರಿಸಲು, ದೊಡ್ಡ ಕನಸು ಕಾಣಲು ಮತ್ತು ಉನ್ನತ ಗುರಿ ಸಾಧಿಸಲು ಸ್ಫೂರ್ತಿ ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಅರ್ಜುನ ಪ್ರಶಸ್ತಿ ವಿಜೇತೆ ತೇಜಸ್ವಿನಿ ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಮಾರ್ಗದರ್ಶನ ನೀಡಿದವರು. ಅವರು ಹಲವು ವರ್ಷ ಭಾರತ ತಂಡದ ನಾಯಕಿಯಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡ 2010ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಕೆಲವು ವರ್ಷಗಳ ಹಿಂದೆ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಿಸಲಾಗಿತ್ತು. ತಂಡದಲ್ಲಿ ಕರ್ನಾಟಕದ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಕೂಡ ಸೇರಿದ್ದರು.


