ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಐದೂ ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಚಾಮರಾಜನಗರದಲ್ಲಿ ಹೇಳಿರುವ ಬಗ್ಗೆ ಕೇಳಿದಾಗ “ಬಹಳ ಸಂತೋಷ, ಅವರಿಗೆ ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿಯನ್ನು ಪಕ್ಷ ಕೊಟ್ಟಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರ ಭೇಟಿಯ ಬಗ್ಗೆ ಕೇಳಿದಾಗ, “ವಿಧಾನಪರಿಷತ್ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆ ಮಾಡಬೇಕು ಎಂದು ಪಕ್ಷದ ಸದಸ್ಯರುಗಳು ಮನವಿ ಮಾಡಿದ್ದಾರೆ. ಈ ಹಿಂದೆಯೇ ಇದನ್ನು ಮಾಡಬೇಕಿತ್ತು. ಮೇಲ್ಮನೆಯಲ್ಲಿ ವಿಪಕ್ಷಗಳ ಹಾಗೂ ನಮ್ಮ ಸಂಖ್ಯೆ ಸಮನಾಗಿದೆ. ಗಾಯತ್ರಿ ಅವರ ಪ್ರಕರಣವನ್ನು ನ್ಯಾಯಲಯದಲ್ಲಿ ಗೆದ್ದಿದ್ದೇವೆ. ಅಲ್ಲಿಂದ ಆದೇಶ ಪಡೆಯಬೇಕಿದೆ. ಆಗ ನಮ್ಮ ಸದಸ್ಯರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಸದಸ್ಯರು ತಿಳಿಸಿದ್ದಾರೆ” ಎಂದರು.
ಸಚಿವರು, ಶಾಸಕರು, ಎಂಎಲ್ ಸಿಗಳ ದೆಹಲಿ ಭೇಟಿ ಹಾಗೂ ವಿಚಾರವಾಗಿ ಕೇಳಿದಾಗ, “ನನಗೆ ಇದರ ಬಗ್ಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಕೇಳಿಯೂ ಇಲ್ಲ. ಈ ವಿಚಾರ ನನಗೆ ಗೊತ್ತೂ ಇಲ್ಲ” ಎಂದರು. ಸರ್ಕಾರಕ್ಕೆ ಎರಡುವರೆ ವರ್ಷ ಪೂರೈಸಿದ ದಿನವೇ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಮನೆಯಿಂದ ಹೊರಗಡೆ ಬಂದಿಲ್ಲ. ಸ್ನಾನವನ್ನೂ ಮಾಡಿಲ್ಲ” ಎಂದು ಪ್ರತಿಕ್ರಿಯಿಸಿದರು.


