ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಶಬರಿಮಲೆಯಾತ್ರೆ ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇರಳ ಸರ್ಕಾರವು ಬಿಡುಗಡೆ ಮಾಡಿರುವ ಆರೋಗ್ಯ ಮಾರ್ಗದರ್ಶಿಯಲ್ಲಿ ಎಚ್ಚರಿಕೆ ನೀಡಿದೆ.
ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು, ಯಾತ್ರೆಗೆ ಬರುವಾಗ ನಿಮ್ಮೊಂದಿಗೆ ಅಗತ್ಯ ಔಷಧ ತರಬೇಕು, ಯಾತ್ರೆ ಆರಂಭಕ್ಕೂ ಕೆಲವು ದಿನಗಳ ಮೊದಲೇ ವಾಕಿಂಗ್ ಅಭ್ಯಾಸ ಮಾಡಿಕೊಂಡು ಬೆಟ್ಟ ಹತ್ತುವಾಗ ಯಾವುದೇ ಧಾವಂತ ಮಾಡದೆ ನಿಧಾನವಾಗಿ ಹತ್ತಬೇಕು ಎಂದು ಆರೋಗ್ಯ ಸಂಬಂಧಿ ಸಲಹೆಗಳನ್ನು ಪ್ರಕಟಿಸಿದೆ.
ಆರೋಗ್ಯಕ್ಕೆ ಸಂಬಂಧಿಸಿದಂತೆ ಸಹಾಯ ಬೇಕಿದ್ದಲ್ಲಿ ಅಲ್ಲಿನ ಸಿಬ್ಬಂದಿಯನ್ನು ತಕ್ಷಣ ಸಂಪರ್ಕಿಸಿ, ಹಾವು ಕಡಿದಲ್ಲಿ ಕೂಡಲೇ ಸಿಬ್ಬಂದಿ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸೂಚಿಸಿದೆ. ಯಾತ್ರಿಕರು ಬಯಲು ಬಹಿರ್ದೆಸೆ ಮಾಡುವುದನ್ನು ನಿಷೇಧಿಸಲಾಗಿದೆ. ನಿಗದಿತ ಸ್ಥಳಗಳಲ್ಲಿಯೇ ಶೌಚಕರ್ಮ ಮುಗಿಸಿ, ಸಾಬೂನಿನಿಂದ ಕೈತೊಳೆದುಕೊಳ್ಳುವಂತೆ ತಿಳಿಸಿದೆ. ಯಾತ್ರಿಕರು ಕೇವಲ ಬಿಸಿ ನೀರನ್ನು ಕುಡಿಯುವಂತೆಯೂ ಆರೋಗ್ಯ ಮಾರ್ಗದರ್ಶಿಯಲ್ಲಿ ಎಚ್ಚರಿಸಿದೆ. ತುರ್ತು ಸಂದರ್ಭದಲ್ಲಿ 04735 203232 ಸಂಖ್ಯೆಗೆ ಕರೆ ಮಾಡಬಹುದೆಂದು ತಿಳಿಸಿದೆ.


