ಸರ್ಕಾರವು ಕೃಷಿ ವಿಶ್ವವಿದ್ಯಾಲಯಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಕೃಷಿ ಸಂಶೋಧಕರು ಮತ್ತು ಕೃಷಿಕರು ಹೊಸ ಹೊಸ ಸಂಶೋಧನೆಗಳ ಅವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಜಿ.ಕೆ.ವಿ.ಕೆ ಯಲ್ಲಿ ಹಮ್ಮಿಕೊಳ್ಳಲಾದ “ಕೃಷಿ ಮೇಳ – 2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈ ಹಿಂದೆ 4 ಕೃಷಿ ವಿಶ್ವವಿದ್ಯಾನಿಲಯಗಳು ಇದ್ದವು. ಕಳೆದ ಸಾಲಿನಿಂದ 5 ನೇ ಕೃಷಿ ವಿಶ್ವವಿದ್ಯಾನಿಲಯ ಆರಂಭವಾಗಿದ್ದು, ಎಲ್ಲಾ 5 ವಿಶ್ವ ವಿದ್ಯಾನಿಲಯಗಳಿಂದಲೂ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಕೃಷಿ ವಿಶ್ವವಿದ್ಯಾಲಯಗಳು ಹೊಸ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುತ್ತಿದೆ. ಇದರೊಂದಿಗೆ ಹೊಸ ತಂತ್ರಜ್ಞಾನ ಆವಿಷ್ಕರಾಗಳನ್ನು ಮಾಡತೊಡಗಿವೆ. ಹಿಂದೆ ಮಳೆಯನ್ನೇ ನಂಬಿಕೊಂಡು ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಇಂದು ಹೊಸ ಆವಿಷ್ಕಾರಗಳಿಂದಾಗಿ ತಾಂತ್ರಿಕತೆಯ ಬಳಕೆಯಿಂದ ಎಲ್ಲಾ ಕಾಲದಲ್ಲೂ ಸಹ ರೈತರು ಬಿತ್ತನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಇಳುವರಿಯೊಂದಿಗೆ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿಜ್ಞಾನಿಗಳು ಅಧಿಕಾರಿಗಳು ಅಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಅವಿμÁ್ಕರ ಮಾಡಿರುವ ಹೊಸ ತಳಿಗಳು ಎಂದರು.
ಇಡೀ ವಿಶ್ವದಲ್ಲಿಯೇ ನಮ್ಮ ದೇಶ ಆರ್ಥಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಮೂಲತಃ ರೈತರ ಶ್ರಮ ಮತ್ತು ಅವರ ಬದ್ದತೆ ಎಂದರೆ ತಪ್ಪಾಗಲಾರದು. ರೈತ ಹೊಸ ಅಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ತಮ ಬೆಳೆಗಳನ್ನು ತೆಗೆಯುತ್ತಿದ್ದಾನೆ. ನಾವು ಈಗ ಆಹಾರ ಪದಾರ್ಥಗಳನ್ನಲ್ಲದೇ, ಹಣ್ಣು, ತರಕಾರಿ, ಹೋಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು ಮುಂದುವರೆದಿದ್ದೇವೆ ಎಂದರೆ ನಮ್ಮ ವಿಜ್ಞಾನಿಗಳ ಹೊಸ ಹೊಸ ಸಂಶೋಧನೆಗಳೇ ಕಾರಣ ಎಂದು ಹೇಳಿದರು.
ರಾಷ್ಟ್ರದಲ್ಲಿ ಇರುವ 75 ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು 11ನೇ ಸ್ಥಾನದಲ್ಲಿ ಇದ್ದು ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿ ಇದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಪ್ರತಿ ವರ್ಷ ಹೊಸ ತಳಿಗಳನ್ನು ಉದ್ಘಾಟನೆ ಮಾಡುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕಳೆದ 2 ವರ್ಷಗಳಲ್ಲಿ ಅನೇಕ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಹೊಸ ತಳಿಗಳನ್ನು ಬಿಡುಗಡೆ ಮಾಡಿದೆ. ಇಂದು ಸಹ 5 ಹೊಸ ತಳಿಗಳಾದ ಸೂರ್ಯಕಾಂತಿ – ಕೆ.ಬಿಎಸ್ 88, ಜೋಳ – ಸಿಎನ್ಬಿಎನ್, ಹರಳಿನ ತಳಿ, ನೀಲಿಗೆಡ್ಡೆ (ಕಪ್ಪು ಹರಿಶಿಣ) ಹಾಗೂ ಹರಿಶಿಣ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ಸಹ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಕೊಡುವಂತಹ ತಳಿಗಳಾಗಿವೆ ಎಂದು ತಿಳಿಸಿದರು.
ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಸಹ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಯುವಕರು ಸಹ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಅಗತ್ಯ ಮಾರ್ಗದರ್ಶನ ನೀಡಬೇಕು. ಈ ವರ್ಷ 5000 ಉದ್ಯಮಿಗಳಿಗೆ ಕೆಪೆಕ್ ನಿಂದ 15 ಲಕ್ಷ ರೂಗಳ ಸಹಾಯಧನವನ್ನು ನೀಡಲಾಗುತ್ತಿದ್ದು ರಾಜ್ಯ ಸರ್ಕಾರದಿಂದ 9 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರದಿಂದ ಉಳಿದ 6 ಲಕ್ಷ ರೂ ನೀಡಲಾಗುತ್ತಿದೆ. ದೊಡ್ಡ ಮಟ್ಟದ ಕಟಾವು ಯಂತ್ರೋಪಕರಣಗಳ ಖರೀದಿಗಾಗಿ ಸಾಮಾನ್ಯ ವರ್ಗ ಕೃಷಿಕರಿಗೆ 40 ಲಕ್ಷ ರೂ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ 50 ಲಕ್ಷ ರೂ ವರೆಗೆ ಸಹಾಯಧನ ನೀಡಲಾಗುತ್ತಿದೆ. ಅದೇ ರೀತಿ ಕೃಷಿ ಹೊಂಡಗಳ ನಿರ್ಮಾಣಕ್ಕೂ ಸಹ ಗರಿಷ್ಠ ಮಟ್ಟದ ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇತ್ತೀಚಿಗೆ ಫಿಲಿಪೈನ್ಸ್ ದೇಶಕ್ಕೆ ಪ್ರವಾಸ ಕೈಗೊಂಡು ಮನಿಲಾದಲ್ಲಿರುವ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಫಿಲಿಪೈನ್ಸ್ ದೇಶದಲ್ಲಿ ಸುಮಾರು 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲೂ ನಮ್ಮ ವಿಜ್ಞಾನಿಗಳು ರೈತರಿಗೆ ಇಂತಹ ತಳಿ ಸಂಶೋಧಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಜಿ.ಕೆ.ವಿ.ಕೆ ಕೃಷಿ ವಿಶ್ವವಿದ್ಯಾಲಯವು ಯಶಸ್ವಿಯಾಗಿ ಉತ್ತಮವಾದ ಕೆಲಸವನ್ನು ನಿರ್ವಹಿಸುತ್ತಾ ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶವು ಹಾನಿಯಾಗಿದ್ದು, ರೈತರು ತುಂಬಾ ಸಂಕಷ್ಡ ಅನುಭವಿಸಿದರು. ಅದರಲ್ಲಿ ಉತ್ತರ ಕರ್ನಾಟದ ಜಿಲ್ಲೆಗಳು ಬಹಳ ಮಳೆ ಹಾನಿಗೆ ಒಳಗಾಗಿದ್ದು, ಈ ಪ್ರದೇಶಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕಂದಾಯ ಸಚಿವರು, ನಾನು ಸಹ ಭೇಟಿ ನೀಡಿ ಪರಶೀಲಿಸಿ, ಮಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಎನ್ಡಿಆರ್.ಎಫ್ ನಿಂದ ರೂ 8500/- ಹಾಗೂ ರಾಜ್ಯ ಸರ್ಕಾರದಿಂದ ರೂ 8500/- ರಂತೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಧನವನ್ನು ಡಿ.ಬಿ.ಟಿ. ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.
ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮಾತನಾಡಿ, ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ತಾವು ಬೆಳೆಯುವಂತಹ ಹಣ್ಣು ಮತ್ತು ತರಕಾರಿಗಳನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ದೇಶದಲ್ಲಿ 350 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಬೆಳೆಗಳನ್ನು ಹಾಗೂ 350 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಶೇಕಡ 80 ರಷ್ಟು ಜನ 2.5 ಎಕರೆ ಜಮೀನು ಹೊಂದಿರುವ ಸಣ್ಣ ಭೂ ಹಿಡುವಳಿ ರೈತರಿದ್ದಾರೆ. ಕೃಷಿಕರ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕಿಸಾನ್ ಸಮ್ಮಾನ್ ಯೋಜನೆ, ಬೆಳೆ ವಿಮೆ, ಹೊಸ ಕೃಷಿ ತಂತ್ರಜ್ಞಾನಗಳ ಆವಿμÁ್ಕರಕ್ಕೆ ಆದ್ಯತೆ ನೀಡಲಾಗಿದೆ. ರೈತರು ತಾವು ಬೆಳೆದಿರುವ ಹಣ್ಣು, ತರಕಾರಿ ಬೆಳೆಗಳನ್ನು ಕೃಷಿಯಾಗಿ ಅಲ್ಲದೇ ಕೃಷಿ ಕೈಗಾರಿಕೆಗಳಾಗಿ ಪರಿವರ್ತನೆ ಮಾಡಿಕೊಂಡು ಅಭಿವೃದ್ದಿ ಹೊಂದಬೇಕು. ಕೃಷಿ ವಿಶ್ವವಿದ್ಯಾನಿಲಯವು ಹೆಚ್ಚು ವಿಜ್ಞಾನಿಗಳನ್ನು ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕøತರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ 91 ಸಾಧಕರ ಯಶೋಗಾಥೆಗಳನ್ನೊಳಗೊಂಡ ಕೃಷಿ ಸಾಧಕರ ಕೈಪಿಡಿ ಮತ್ತು ತಂತ್ರಜ್ಞಾನಗಳ ನೂತನ ತಳಿ ಮತ್ತು ತಾಂತ್ರಿಕತೆಗಳ ಪಕ್ಷಿನೋಟ ಬಿಡುಗಡೆ ಮಾಡಲಾಯಿತು.
ಕೆನರಾ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ರಾಮನಗರ ತಾಲೂಕಿನ ಲಕ್ಷ್ಮೀಪುರದ ಎಲ್.ವಿ.ಶಿವರಾಜು, ಕ್ಯಾನರಾ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ದೊಡ್ಡಬಳ್ಳಾಪುರ ತಾಲೂಕಿನ ಕೆಂಜಿಗನಹಳ್ಳಿಯ ಶ್ರೀಮತಿ ಪದ್ಮಿನಿ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಕೋಲಾರ ತಾಲೂಕಿನ ಮದನಹಳ್ಳಿಯ ಎಂ.ಎನ್.ರವಿಶಂಕರ್ ಅವರಿಗೆ ಲಭಿಸಿದೆ.


