75 ವರ್ಷ ದಾಟಿದವರು ಜವಾಬ್ದಾರಿಗಳನ್ನು ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದು, ಭಾರತದ ರಾಜಕಾರಣದಲ್ಲಿ ಬಿರುಸಿನ ಚರ್ಚೆಯನ್ನು ಹುಟ್ಟು ಹಾಕಿದೆ.
ಜುಲೈ 9 ರಂದು ನಾಗ್ಪುರದಲ್ಲಿ ನಡೆದ ಹಿರಿಯ ಆರ್ಎಸ್ಎಸ್ ನಾಯಕ ಮೊರೋಪಂತ್ ಪಿಂಗಳೆ ಅವರ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಭಾಗ್ವತ್ ವೃಂದಾವನದಲ್ಲಿ ನಡೆದ ಸಂಘ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ನೀವು ನನಗೆ 75 ನೇ ವಯಸ್ಸಿನಲ್ಲಿ ಯಾರನ್ನಾದರೂ ಸನ್ಮಾನಿಸಿದರೆ, ಅದರ ಅರ್ಥ ಈಗ ನಿಮ್ಮ ಸಮಯ ಮುಗಿದಿದೆ, ಈಗ ಪಕ್ಕಕ್ಕೆ ಸರಿದು ಕೆಲಸ ಮಾಡೋಣ ಎಂದು ಆಗಿರುತ್ತದೆ ಎಂಬುದಾಗಿ ಮೊರೋಪಂತ್ ಪಿಂಗಳೆ ಈ ಸಂದರ್ಭದಲ್ಲಿ ಹೇಳಿದರು.
74 ವರ್ಷದ ಭಾಗವತ್ ಸೆಪ್ಟೆಂಬರ್ಗೆ 75 ವರ್ಷ ಪೂರ್ಣಗೊಳಿಸಲಿದ್ದಾರೆ. ನಂತರ ಅವರು ಆರೆಸ್ಸೆಸ್ ನಾಯಕತ್ವದಿಂದ ಹಿಂದೆ ಸರಿಯಬಹುದು ಎನ್ನಲಾಗಿದೆ, ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರ ನಿವೃತ್ತಿ ಕುರಿತು ಚರ್ಚೆಗಳು ಕಾವೇರಿವೆ.
ಪ್ರಧಾನಿ ಮೋದಿಯವರಿಗೆ ೭೪ ವರ್ಷವಾಗಿದೆ. ಭಾಗವತ್ 75ರಲ್ಲಿ ನಿವೃತ್ತಿಯಾದರೆ, ಈ ನಿಯಮ ಮೋದಿಗೂ ಅನ್ವಯವಾಗಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಒತ್ತಾಯಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾಗವತ್ ಹೇಳಿಕೆಯು ಕೇವಲ ಆರ್ಎಸ್ಎಸ್ಗೆ ಸಂಬಂಧಿಸಿದ್ದಲ್ಲ, ಬಿಜೆಪಿಯ ಭವಿಷ್ಯದ ನಾಯಕತ್ವದ ಮೇಲೂ ಪರಿಣಾಮ ಬೀರಬಹುದು. 2024ರ ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ ಸಂಪೂರ್ಣ ಬಹುಮತ ಪಡೆಯದಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
ಭಾಗವತ್ ಅವರ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್, ಭಯ್ಯಾಜಿ ಜೋಶಿ ಮುಂತಾದವರ ಹೆಸರು ಕೇಳಿಬರುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ಗೆ ಭೇಟಿ ನೀಡಿದಾಗ, ಎರಡು ದಶಕಗಳ ರಾಜಕೀಯ ಜೀವನ ಸಾಕು. ವೇದಗಳು, ಉಪನಿಷತ್ತುಗಳ ಅಧ್ಯಯನ ಮತ್ತು ನೈಸರ್ಗಿಕ ಕೃಷಿಯತ್ತ ಗಮನ ಹರಿಸುವುದಾಗಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ.