ದಲಿತನೆಂಬ ಕಾರಣಕ್ಕೆ ತುಮಕೂರು ಮಿಲ್ಕ್ ಯೂನಿಯನ್ ನಲ್ಲಿ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಕಚೇರಿಯ ಹಿರಿಯ ಅಧಿಕಾರಿಗಳು ದಲಿತ ಅಧಿಕಾರಿಯ ಕುರ್ಚಿ-ಟೇಬಲ್ ಕಿತ್ತುಕೊಂಡು ನೆಲದ ಮೇಲೆ ಕುಳಿತು ಕೆಲಸ ಮಾಡಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತುಮುಲ್ ಲೆಕ್ಕಪತ್ರ ವಿಭಾಗದ ಆಡಳಿತ ಅಧೀಕ್ಷಕ ವಿನಯ್ ಮೂಲತಃ ರಾಮನಗರ ಜಿಲ್ಲೆಯವರು, ಎಂಕಾಂ ಮತ್ತು ಎಂಬಿಎ ಪದವೀಧರರಾಗಿದ್ದಾರೆ. ಎಂಟು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಮೇಲ್ವಿಚಾರಕ ರಾಗಿರುವ ಮೇಲ್ಜಾತಿಯ ಉಮೇಶ್ (ಯುಮೇಶ್) ಎಸ್ ಮತ್ತು ಪರಿಶಿಷ್ಟ ವರ್ಗದ ಮಂಜುನಾಥ ನಾಯಕ್ ಸೇರಿ ಕಿರುಕುಳ ನೀಡುತ್ತಿದ್ದಾರೆ. ನಾನು ಅವರಿಗೆ ಫೇವರ್ ಆಗಿ ಕೆಲಸ ಮಾಡಿಲ್ಲ ಎಂಬುದೇ ಈ ಕಿರುಕುಳಕ್ಕೆ ಪ್ರಮುಖ ಕಾರಣವೆಂದು ವಿನಯ್ ಆರೋಪಿಸಿದ್ದಾರೆ.
ನನಗೆ ನೀಡಿದ್ದ ಕುರ್ಚಿ, ಟೇಬಲ್ ಇನ್ನಿತರ ವಸ್ತು ಕಿತ್ತುಕೊಂಡಿದ್ದಾರೆ, ಮಾನಸಿಕವಾಗಿ ಕುಗ್ಗಿ ಹೋಗುವಂತೆ ಜಾತಿ ನಿಂದನೆ ಮಾಡಿ ಹಲ್ಲೆಗೂ ಮುಂದಾಗಿದ್ದಾರೆ. ನನ್ನನ್ನು ನೆಲದ ಮೇಲೆ ಕುಳಿತು ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವಿನಯ್ ಅಳಲು ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ನಿರ್ದೇಶಕ ಶ್ರೀನಿವಾಸನ್ ಅವರೇ ಈ ಕಿರುಕುಳಕ್ಕೆ ಪರೋಕ್ಷ ಸಮರ್ಥನೆ ನೀಡಿದ್ದಾರೆ. ಒಕ್ಕೂಟದ ಎಂಡಿ ಸೂಚನೆ ಅನ್ವಯ, ಇಷ್ಟು ದಿನ ನಾನು ನೆಲದ ಮೇಲೆ ಕುಳಿತುಕೊಳ್ಳಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲವನ್ನೂ ಕಸಿದುಕೊಂಡಿದ್ದಾರೆ. ಈಗ ಬರೀ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ ಎಂದು ವಿನಯ್ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಂಡಿ ಶ್ರೀನಿವಾಸನ್ ಅವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ವಿನಯ್ ತಿಳಿಸಿದ್ದಾರೆ.
ವಿನಯ್ ಅವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ನಾನೇ ರಾಜೀನಾಮೆ ನೀಡಿ ಹೋಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿದ್ದಾರೆ, ಪೊಲೀಸರು ಈ ದೂರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷ (ಎಸ್ಪಿ)ರಿಗೆ ವಿಚಾರವನ್ನು ತಿಳಿಸಿದ್ದೇನೆ. ಇದುವರೆಗೂ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ವಿನಯ್ ತಿಳಿಸಿದ್ದಾರೆ.