Menu

ಐಟಿ, ಇಡಿಯನ್ನು ಬಿಜೆಪಿ ಮೋರ್ಚಾ ಮಾಡಿಕೊಂಡಿದೆ: ಸಚಿವ ಈಶ್ವರ ಖಂಡ್ರೆ

eshwar khandre

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಅಂಕಿ ಅಂಶಗಳ ಪರಾಮರ್ಶೆಗಾಗಿ ಮರು ಸಮೀಕ್ಷೆ ನಡೆಸುವ ನಿರ್ಧಾರವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಅವರು, ಈ ವರದಿ 10 ವರ್ಷಗಳಷ್ಟು ಹಳೆಯದಾಗಿತ್ತು, ನಂತರ ಸಾಕಷ್ಟು ಬದಲಾವಣೆ ಆಗಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು. ಇದಕ್ಕೆ ಅನುಗುಣವಾಗಿ ನ್ಯೂನತೆಗಳನ್ನು ಸರಿಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈಗ ಪ್ರತಿಪಕ್ಷಗಳು ಸರ್ಕಾರದ ನಿರ್ಧಾರ ಟೀಕಿಸುತ್ತಿವೆ. ಬಿಜೆಪಿ 5 ವರ್ಷ ಅಧಿಕಾರದಲ್ಲಿತ್ತು. ಆಗ ಏಕೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇ.ಡಿ., ಐ.ಟಿ., ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯ ದುರುದ್ದೇಶಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಜಗಜ್ಜಾಹೀರಾಗಿದೆ. ನ್ಯಾಯಾಲಯಗಳು ಕೂಡ ಹಲವು ಬಾರಿ ಎಚ್ಚರಿಕೆ ನೀಡಿವೆ ಎಂದರು.

ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿಯು ತನ್ನ ಒಂದು ಮೋರ್ಚಾದಂತೆ ವರ್ತಿಸುವಂತೆ ಮಾಡಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಅಂದಿನ ಅರಣ್ಯ ಸಚಿವರ ಮತ್ತು ಸಚಿವ ಸಂಪುಟದ ಅನುಮತಿ ಇಲ್ಲದೆ ಅರ್ಜಿ ಸಲ್ಲಿಸಿರುವ ಐ.ಎಫ್.ಎಸ್. ಅಧಿಕಾರಿ ಆರ್. ಗೋಕುಲ್ ಅಮಾನತನ್ನು ಈಶ್ವರ ಖಂಡ್ರೆ ಸಮರ್ಥಿಸಿಕೊಂಡರು.

15 ಸಾವಿರ ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ಇಂದಿಗೂ 280 ಎಕರೆಯಷ್ಟು ಅರಣ್ಯವಿದೆ. ಆದರೆ ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಗೆ ಸುಳ್ಳು ಪ್ರಮಾಣಪತ್ರ ನೀಡಿದ ಅಧಿಕಾರಿಗಳ ನಡೆ, ಕಾನೂನು ಬಾಹಿರವಾಗಿದ್ದು, ಇದು ಸರ್ಕಾರಕ್ಕೆ, 7 ಕೋಟಿ ಜನರಿಗೆ ಮಾಡಿದ ಅಪಚಾರ ಮತ್ತು ದ್ರೋಹ. ಹೀಗಾಗಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಇದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಅದು ರಾಜ್ಯಕ್ಕೆ ಮಾಡುವ ದ್ರೋಹ ಎಂದರು.

ಬನ್ನೇರುಘಟ್ಟದಲ್ಲಿ ಪ್ರಥಮ ಇ.ವಿ. ಸಫಾರಿ ಬಸ್:

ವಾಹನಗಳಿಂದ ಹೆಚ್ಚುತ್ತಿರುವ ಇಂಗಾಲದ ಹೊರಹೊಮ್ಮುವಿಕೆ ತಡೆಯಲು ಇಲಾಖೆ ಪ್ರಯತ್ನಶೀಲವಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬನ್ನೇರುಘಟ್ಟ ಸಫಾರಿಯಲ್ಲಿ ಹೊಗೆ ರಹಿತ ಇ.ವಿ. – ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ನಾಳೆ ಈ ವಾಹನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ನಾಳೆ ಸಚಿವ ಸಂಪುಟದ ಸಭೆ ಇದ್ದು, ಕೇರಳ ರಾಜ್ಯದ ಅರಣ್ಯ ಸಚಿವರು ಭೇಟಿಯಾಗಲು ಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯದೊಳಗೆ ಇ.ವಿ. ಸಫಾರಿ ವಾಹನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

Related Posts

Leave a Reply

Your email address will not be published. Required fields are marked *