ಸಾರಿಗೆ ಇಲಾಖೆಯಲ್ಲಿ ಡಿಸೇಲ್ ಕೊರತೆ ಇಲ್ಲ. ನಾವು ಬಸ್ ದರ ಹೆಚ್ಚಳ ಮಾಡಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಬಸ್ ಕೂಡಾ ಖರೀದಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ 7 ಸಾವಿರದಷ್ಟು ಬಸ್ಗಳನ್ನು ಖರೀದಿಸಿದ್ದೇವೆ. ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ಯಾರಂಟಿಯಿಂದ ತೊಂದರೆಯಾಗಿದ್ದು, ನಿಜ. ಹೆಚ್ಚಿನ ಬಸ್ ಓಡಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಬಿಜೆಪಿಗರು ಸಾರಿಗೆ ಇಲಾಖೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆನೂ ಬರೋಲ್ಲ. ಹೀಗಾಗಿಯೇ ಈ ಉಪಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ತಿರುತ್ತಿದ್ದು, ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಬಜೆಟ್ ಗಾತ್ರಕ್ಕಿಂತ ಅಧಿಕ ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಿ ಆರ್ಥಿಕ ಸಮಸ್ಯೆ ಉಂಟು ಮಾಡಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿಯುವಾಗ 80 ಸಾವಿರ ಕೋಟಿ ರೂ. ಬಾಕಿ ಇಟ್ಟು ಹೋಗಿದ್ದರು. ನೀರಾವರಿ ಕೆಲಸಗಳನ್ನು ಮಾಡಿಲ್ಲ ಎಂದ ಅವರು, ನಾನು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಜನರಿಗೆ ಅನುಕೂಲವಾಗಿವೆ. ಸಿಎಂ ಸಿದ್ದರಾಮಯ್ಯ ಸಾಲ ರಾಮಯ್ಯ ಅಂತ ಪ್ರಚಾರ ಮಾಡುವುದು ಸರಿಯಲ್ಲ. ದೇಶದ ಮೇಲೆ ನಾಲ್ಕು ಲಕ್ಷ ಕೋಟಿ ರೂ. ಸಾಲ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ರಂಪ್ ಹೇಳಿದಾಗೇ ಕುಣಿಯುತ್ತಾರೆ. ವಿಶ್ವಗುರು ಅಲ್ಲ. ವಿಶ್ವ ವಿಖ್ಯಾತ ಸಾಲಗಾರ ಅಂತ ಟೀಕಿಸಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಜೆ.ಟಿ.ಪಾಟೀಲ, ಅಜಯಕುಮಾರ ಸರನಾಯಕ, ಸೌಮ್ಯ ರೆಡ್ಡಿ ಸೇರಿದಂತೆ ಅನೇಕರಿದ್ದರು.


