ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದ್ದು, ಎರಡೂ ದೇಶಗಳ ಕ್ರಿಕೆಟ್ ಸರಣಿಯನ್ನು ಆಫ್ಘಾನಿಸ್ತಾನ ಬಹಿಷ್ಕರಿಸಿದೆ.
ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನಿಸ್ತಾನದ ಸ್ಥಳೀಯ ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್ನಿಂದ ಶರಾನಾಗೆ ಪ್ರಯಾಣಿಸಿದಾಗ ದಾಳಿ ನಡೆದಿದ್ದು, ಮೂವರು ಕ್ರಿಕೆಟಿಗರು ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟಿರುವ ಕ್ರಿಕೆಟಿಗರನ್ನು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಇದೀಗ ಈ ದಾಳಿ ವಿರುದ್ಧ ಅಫ್ಘಾನಿಸ್ತಾನ್ ಕ್ರಿಕೆಟಿಗರು ಧ್ವನಿಯೆತ್ತಿದ್ದು, ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇದು ಅಫ್ಘಾನಿಸ್ತಾನದ ಕ್ರೀಡಾ ಸಮುದಾಯ, ಕ್ರಿಕೆಟ್ ಕುಟುಂಬಕ್ಕೆ ದೊಡ್ಡ ನಷ್ಟ. ದುಃಖಿತ ಕುಟುಂಬಗಳಿಗೆ ಸಂತಾಪ ಮತ್ತು ಅವರೊಂದಿಗೆ ನಾವು ಇರಲಿದ್ದೇವೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಸಂತ್ರಸ್ತರಿಗೆ ಗೌರವದ ಸಂಕೇತವಾಗಿ ಮುಂದಿನ ತಿಂಗಳು ನಡೆಯಲಿರುವ ತ್ರಿಕೋನ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ. ಈ ದಬ್ಬಾಳಿಕೆಗಾರರು ಮುಗ್ಧ ನಾಗರಿಕರು ಮತ್ತು ನಮ್ಮ ದೇಶೀಯ ಕ್ರಿಕೆಟ್ ಆಟಗಾರರ ಹತ್ಯೆ ಮಾಡಿದ್ದು ಘೋರ, ಕ್ಷಮಿಸಲಾಗದ ಅಪರಾಧ ಎಂದು ಅಫ್ಘಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗ ಫಜಲ್ಹಕ್ ಫಾರೂಕಿ ಬರೆದಿದ್ದಾರೆ.
ಈ ಘಟನೆ ಪಕ್ತಿಕಾಗೆ (ಅಫ್ಘಾನಿಸ್ತಾನ್ ಊರು) ಮಾತ್ರವಲ್ಲದೆ, ಇಡೀ ಅಫ್ಘಾನಿಸ್ತಾನ್ ಕ್ರಿಕೆಟ್ ಕುಟುಂಬ ಮತ್ತು ಇಡೀ ರಾಷ್ಟ್ರಕ್ಕೆ ದುಃಖಕರ ವಿಷಯ ಎಂದು ಮತ್ತೊಬ್ಬ ಅಂತರರಾಷ್ಟ್ರೀಯ ಆಟಗಾರ ಮೊಹಮ್ಮದ್ ನಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.