ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಸೀಳಿ ಕೊಂದಿದ್ದ ಪಾಗಲ್ ಪ್ರೇಮಿಯನ್ನು ಬೆಂಗಳೂರಿನ ಶ್ರೀರಾಂಪುರ ಪೊಲೀಸರು ಬಂಧಿಸುವಲ್ಲಿ ಯಶಸಸ್ವಿಯಾಗಿದ್ದಾರೆ.
ಬಿ ಫಾರ್ಮಾ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಮಲ್ಲೇಶ್ವರದ ರೈಲ್ವೆ ನಿಲ್ದಾಣದ ಬಳಿ ಕೊಲೆ ಮಾಡಿ ಪರಾರಿಯಾಗಿದ್ದ ವಿಘ್ನೇಶ್ ಸೋಲದೇವನಹಳ್ಳಿಯಲ್ಲಿ ಅಡಗಿಕೊಂಡಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಇದೇ ವೇಳೆ ಸೈಕೋ ಕಿಲ್ಲರ್ ವಿಘ್ನೇಶ್ ಹತ್ಯೆಗೆ ಸಂಚು ಹಾಕಲು ಮಿಷನ್ ಯಾಮಿನಿ ಪ್ರಿಯಾ ಅಂತ ವಾಟ್ಸಪ್ ಗ್ರೂಪ್ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪ್ರಕರಣ ಸಂಬಂಧ ಶ್ರೀರಾಂಪುರ ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮಿಷನ್ ಯಾಮಿನಿ ಪ್ರಿಯಾ ಎಂದು ವಾಟ್ಸಪ್ ಗ್ರೂಪ್ ಕ್ರಿಯೆಟ್ ಮಾಡಿ, ಈ ಮೂಲಕ ಹತ್ಯೆಗೆ ಪ್ಲ್ಯಾನ್ ಮಾಡಿರುವುದಾಗಿ ಗೊತ್ತಾಗಿದೆ. ಈ ಗ್ರೂಪ್ನಲ್ಲಿ ನಾಲ್ಕು ಜನರಿದ್ದು, ತನ್ನ ಪ್ರೇಯಸಿ ಎಲ್ಲಿಗೆ ಹೋಗ್ತಾಳೆ? ಯಾರ ಜೊತೆ ಮಾತನಾಡುತ್ತಾಳೆ? ಎಂದು ಡಿಟೇಲ್ಸ್ ಪಡಯುವ ಸಲುವಾಗಿ ಈ ಗ್ರೂಪ್ ಮಾಡಿದ್ದ ಎನ್ನಲಾಗಿದೆ.
ಮೃತ ಯುವತಿಗೆ ಬಲವಂತವಾಗಿ ಮಾಂಗಲ್ಯ ಕೂಡ ಕಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿಸಿದ್ರೆ ಕೊಲೆ ಮಾಡ್ತೇನೆ ಎಂದು ಬೆದರಿಸಿದ್ದನಂತೆ. ಇನ್ನೂ ಇಬ್ಬರು ಒಂದೇ ಏರಿಯಾದವರಾಗಿದ್ದು, ಆಕೆಯ ಪೋಷಕರಿಗೆ ಹೆಣ್ಣು ಕೇಳಿದ್ದನಂತೆ, ಆದರೆ ಅವರು ನಿರಾಕರಿಸಿದ್ದರು. ಬಳಿಕ ಒಂದು ಸಾರಿ ಗಲಾಟೆ ಮಾಡಿದಾಗ ಆತನ ವಿರುದ್ಧ ಯಾಮಿನಿ ಪೋಷಕರು ದೂರು ಕೊಟ್ಟಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೊಲೆ ಬಳಿಕ ಆರೋಪಿ ವಿಘ್ನೇಶ್ ತಮಿಳುನಾಡಿಗೆ ಪರಾರಿಯಾಗಿದ್ದ ಎಂದು ಶಂಕೆ ವ್ಯಕ್ತವಾಗಿತ್ತು. ಆರೋಪಿ ಪತ್ತೆಗೆ ಪ್ರತ್ಯೇಕ ಎರಡು ತಂಡಗಳನ್ನ ರಚನೆ ಮಾಡಿ ಹುಡುಕಾಟ ನಡೆಸಿದ್ದು, ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?
ಗುರುವಾರ (ಅ.16) ಮಧ್ಯಾಹ್ನ ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ವಿಘ್ನೇಶ್ ಶ್ರೀರಾಂಪುರ ರೈಲ್ವೇ ನಿಲ್ದಾಣದ ಬಳಿ ಹತ್ಯೆ ಮಾಡಿ ತಾನು ಬಳಸುತ್ತಿದ್ದ ಮೊಬೈಲ್ ಎಸೆದು ಎಸ್ಕೇಪ್ ಆಗಿದ್ದ. ಬಳಿಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.