ಮಗನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕಪಾಳ ಮೋಕ್ಷ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೊಡ್ಡಬಳ್ಳಾಪುರ ತಾಲೂಕು ಹಣಬೆ ಗ್ರಾಮದ ಮಂಗಳಮ್ಮ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳಮ್ಮ ನೀಡಿದ ದೂರಿನ ಅನ್ವಯ ಪುತ್ರ ಪಿಎಸ್ಐ ಮಂಜುನಾಥ, ಗೆಳತಿ ಬಸವಜ್ಯೋತಿ, ಈಕೆಯ ಸಹೋದರ ಬಸವಪ್ರಭು ವಿರುದ್ಧ ಎಫ್ಐಆರ್ ದಾಖಲಿಸಿ ಮೂವರು ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳಮ್ಮ ನೀಡಿದ ದೂರಿನಲ್ಲಿ ಮಗ ಮಂಜುನಾಥ್ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಜುನಾಥ್ಗೆ 2011ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಆತ ಬಸವಜ್ಯೋತಿ ಎಂಬ ಯುವತಿ ಜತೆಗೆ ಸಂಬಂಧ ಹೊಂದಿದ್ದು, ಎಷ್ಟೇ ಬುದ್ಧಿವಾದ ಹೇಳಿದರೂ ಆಕೆಯ ಸಹವಾಸ ಬಿಟ್ಟಿಲ್ಲ. ಬಸವ ಜ್ಯೋತಿಗೂ ಕರೆ ಮಾಡಿ ಪುತ್ರನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಸಹವಾಸ ಬಿಟ್ಟು ಬಿಡು ಎಂದು ಹೇಳಿದರೂ ಆಕೆ ಕೇಳಲಿಲ್ಲ ಎಂದು ವಿವರಿಸಿದ್ದಾರೆ.
ಫೆ.16ರಂದು ಬೆಳಗ್ಗೆ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳು ಬಸವಜ್ಯೋತಿ ಮನೆಗೆ ತೆರಳಿ ತಮ್ಮ ಮಗನ ಸಹವಾಸ ಬಿಟ್ಟು ಬಿಡುವಂತೆ ಮನವಿ ಮಾಡಿದೆವು. ಈ ವೇಳೆ ಬಸವಜ್ಯೋತಿ ಮಂಜುನಾಥ್ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಳು. ಆತ ನೀವು ಇಲ್ಲಿಗೇಕೆ ಬಂದಿದ್ದೀರಿ ಎಂದು ನನ್ನ ಬಲ ಕೆನ್ನೆಗೆ ಹೊಡೆದ. ಬಿಡಿಸಲು ಮುಂದಾದ ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೂ ಹಲ್ಲೆ ಮಾಡಿದ. ಬಸವಜ್ಯೋತಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯ ಜುಟ್ಟು ಹಿಡಿದು ಹಲ್ಲೆ ಮಾಡಿದಳು. ಆಕೆಯ ಸಹೋದರ ಬಸವಪ್ರಭು ನಮ್ಮ ಮೇಲೆ ಹಲ್ಲೆ ಮಾಡಿದ. ಮತ್ತೆ ಇಲ್ಲಿಗೆ ಬಂದರೆ,ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಂಗಳಮ್ಮ ದೂರಿನಲ್ಲಿ ತಿಳಿಸಿದ್ದಾರೆ.