ನಮ್ಮ ಮೆಟ್ರೋ ರೈಲು ಸಂಚಾರವನ್ನು ಬೆಂಗಳೂರಿನಿಂದ ತುಮಕೂರು ವರೆಗೂ ವಿಸ್ತರಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.
ಬೆಂಗಳೂರಿಂದ ಹೊಸ ಏರಿಯಾ ಮತ್ತು ಊರುಗಳಿಗೆ ಮೆಟ್ರೋ ಸಂಚಾರ ವಿಸ್ತರಿಸುವ ಕುರಿತು ಮಾಸಾಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಎಂಆರ್ಸಿಎಲ್ ವರದಿ ಸಲ್ಲಿಸಲಿದೆ.
ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡ್ತಿದ್ದಂತೆ DPR ಸಿದ್ಧವಾಗಲಿದ್ದು, ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರಿಂದ 8 ಏರಿಯಾ, ಊರುಗಳಿಗೆ ಮೆಟ್ರೋ ವಿಸ್ತರಣೆಗೆ ನಿರ್ಧರಿಸಲಾಗಿದ್ದು, 3A, 4ನೇ ಹಂತದಲ್ಲಿ 236 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಗೆ BMRCL ಮುಂದಾಗಿದೆ.
ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ ಗಳು ಸೇರಿ ಪಿಂಕ್, ಆರೆಂಜ್ ಬ್ಲ್ಯೂ ಲೈನ್ನಿಂದ 203.67 ಕಿಮೀ ಮೆಟ್ರೋ ಜಾಲವಿದೆ. ಇದನ್ನು ಮತ್ತೆ 236 ಕಿಲೋ ಮೀಟರ್ ವಿಸ್ತರಣೆ ಮಾಡುವ ಮೂಲಕ ಒಟ್ಟು 450 ಕಿ.ಮೀ.ಗೆ ವಿಸ್ತರಿಸಲಿದೆ.
ಹೊಸೂರು ಯೋಜನೆಗೆ ಹಿನ್ನಡೆ
ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಈಗಾಗಲೇ BMRCL ಸ್ಪಷ್ಟನೆ ನೀಡಿದ್ದು, ತಾಂತ್ರಿಕವಾಗಿ ಇದು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ನಡೆಸಿದ ಅಧ್ಯಯನದ ಪ್ರಕಾರ, 23 ಕಿ.ಮೀ. ಉದ್ದದ ಹೊಸೂರು-ಬೊಮ್ಮಸಂದ್ರ ಕಾರಿಡಾರ್ಗೆ 25 ಕೆವಿ ಎಸಿ ಓವರ್ಹೆಡ್ ವಿದ್ಯುತ್ ಶಕ್ತಿ ಬಳಕೆಗೆ ಪ್ರಸ್ತಾಪವಿತ್ತು. ಆದರೆ, ನಮ್ಮ ಮೆಟ್ರೋ ಜಾಲ ಬಳಸುತ್ತಿರುವುದು 750 ಕೆವಿ ಡಿಸಿ ವಿದ್ಯುತ್ ಶಕ್ತಿಯಾದ್ದರಿಂದ ಇವುಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಈ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆ ಸಂಯೋಜನೆ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ BMRCL ಈಗಾಲೇ ಸ್ಪಷ್ಟಪಡಿಸಿದೆ.


