ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭಿರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಕ್ಟೋಬರ್ 4ರಂದು ರಾತ್ರಿ 1:30ರ ಸುಮಾರಿಗೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ಗೆ ಡಿಕ್ಕಿ ಹೊಡೆದ ನಂತರ ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಸ್ಥಳದಿಂದ ಕಾಲ್ಕಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ಟೋಬರ್ 7 ರಂದು ಗಾಯಗೊಂಡ ಮಹಿಳೆಯ ಸಂಬಂಧಿ ಕಿರಣ್ ನೀಡಿದ ದೂರಿನ ಅನ್ವಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ದಿವ್ಯಾ ಸುರೇಶ್ ಅವರ ಕಾರು ಎಂಬುದು ದೃಢಪಟ್ಟಿದೆ.
ಬೈಕ್ ನಲ್ಲಿ ಅನುಷಾ, ಕಿರಣ್ ಮತ್ತು ಅನಿತಾ ಪ್ರಯಾಣಿಸುತ್ತಿದ್ದರು. ಅನುಷಾಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರವೂ ಕೂಗಿ ಕರೆದರೂ ಕೇಳದೇ ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಬೈಕ್ ಮಧ್ಯೆ ಕುಳಿತಿದ್ದ ಅನುಷಾ ಮಂಡಿಗೆ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ನಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅನುಷಾ ಅವರ ಸಂಬಂಧಿ ಕಿರಣ್ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಬೈಕ್ನಲ್ಲಿ ಮಧ್ಯೆ ಅನುಷಾ ಕುತಿದ್ರೂ. ನಾನು ಬೈಕ್ ಓಡಿಸುತ್ತಾ ಇದ್ದೇ, ಅನಿತಾ ಬೈಕ್ ಹಿಂದೆ ಕುಳಿತಿದ್ದರು. ಈ ವೇಳೆ ನಾಯಿ ಬೊಗಳಿದ್ದಕ್ಕೆ ಸ್ವಲ್ಪ ಬಲಕ್ಕೆ ಬೈಕ್ ತೆಗೆದುಕೊಂಡೆ. ಆಗ ಏಕಾಏಕಿ ಕ್ರಾಸ್ನಲ್ಲಿ ಬಂದು ದಿವ್ಯಾ ಸುರೇಶ್ ಕಾರು ಅನಿತಾ ಅವರ ಕಾಲಿಗೆ ಗುದ್ದಿತ್ತು. ದಿವ್ಯಾ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದ ಮೂವರು ಬಿದ್ದೆವು.
ಕಾರು ಡಿಕ್ಕಿ ಹೊಡೆದಾಗ ಮಹಿಳೆಗೆ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ಕೂಡಲೇ ನಮ್ಮನ್ನು ನೋಡದೇ, ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ.
ಅನಿತಾಗೆ ಆಪರೇಷನ್ಗೆ ಎರಡು ಲಕ್ಷ ರೂ. ಹಣ ಖರ್ಚಾಗಿದೆ. ನಾನು ಕ್ಯಾಬ್ ಓಡಿಸಿ ಜೀವನ ಮಾಡುತ್ತಿದ್ದೇನೆ. ಇದುವರೆಗೂ ಸಂತ್ರಸ್ಥ ಮಹಿಳೆಯನ್ನು ನಟಿ ದಿವ್ಯಾ ಸುರೇಶ್ ಸಂಪರ್ಕಿಸಿಲ್ಲ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಕಿರಣ್ ಮನವಿ ಮಾಡಿದ್ದಾರೆ.


