Menu

ಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ: ಡಿಸಿಎಂ ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 4 ಎಂಎಲ್ ಡಿ ಸಾಮರ್ಥ್ಯದ ಜಲಾಗಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.

“ಇಂದು ಶಂಕುಸ್ಥಾಪನೆ ಮಾಡಿರುವ ಯೋಜನೆ ಸುಮಾರು 30 ಸಾವಿರ ಮನೆಗಳು, 2.50 ಲಕ್ಷ ಜನರಿಗೆ ನೀರು ಪೂರೈಸಲಿದೆ. ಈ ಕ್ಷೇತ್ರದಲ್ಲಿ ರಸ್ತೆಗೆ 130 ಕೋಟಿ, ಮೇಲ್ಸೇತುವೆಗೆ 43 ಕೋಟಿ, 320 ಕೋಟಿ ಇತರೆ ವಾರ್ಡ್ ಅಭಿವೃದ್ಧಿಗೆ, 650 ಕೋಟಿ ವೆಚ್ಚದಲ್ಲಿ ಹೊಸ ಫ್ಲೈಓವರ್, ನಿಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ರವಾನಿಸಲಾಗುವುದು. ಇದನ್ನು ಸದ್ಯದಲ್ಲೇ ದೊಡ್ಡ ಆಂದೋಲನದ ರೀತಿಯಲ್ಲಿ ಮಾಡಲಾಗುವುದು. 50X80 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಲು ಪ್ಲಾನ್ ಅನುಮತಿ ಪಡೆಯಲು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಂಬಿಕೆ ನಕ್ಷೆ ಯೋಜನೆ ಜಾರಿ ಮಾಡಲಾಗುವುದು” ಎಂದು ಹೇಳಿದರು.

“ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಇದು ಚಾಲನೆಯಾಗಲಿದೆ. ಇದಾದ ತಕ್ಷಣ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಗುವುದು. ಪಾಲಿಕೆಯ ಸಹಾಯವಾಣಿ ನೀಡಿ ಬೆಂಗಳೂರಿನಲ್ಲಿ ಎಲ್ಲಿ ಕಸ ಇದೆ ಎಂದು ಸಾರ್ವಜನಿಕರು ಹೇಳಿದರೂ ಪಾಲಿಕೆ ವತಿಯಿಂದ ಅದನ್ನು ಸ್ವಚ್ಛಗೊಳಿಸಲಾಗುವುದು. ಆಮೂಲಕ ಸ್ವಚ್ಛ ಬೆಂಗಳೂರು ರೂಪಿಸಲಾಗುವುದು” ಎಂದರು.

“ನಾವು ಕೊಟ್ಟ ಮಾತಿನಂತೆ ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಸರಿಯಾಗಿ ಈಡೇರಿಸಿಕೊಂಡು ಬಂದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ಕೊಡುತ್ತೇವೆ ಎಂದು ಹೇಳಿದ್ದರಲ್ಲಾ ಕೊಟ್ಟರಾ? ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಆದಾಯ ಪಾತಾಳಕ್ಕೆ ಕುಸಿದ ಕಾರಣ ನಾವು ಈ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಬೆಲೆ ಏರಿಕೆ ಮಧ್ಯೆ ನಿಮ್ಮ ಜೀವನ ಸುಗಮವಾಗಿ ಸಾಗಬೇಕು ಎಂದು ಈ ಯೋಜನೆ ನೀಡಿದ್ದೇವೆ” ಎಂದರು.

“ಈ ಕ್ಷೇತ್ರದಲ್ಲಿ ಶಾಲೆ, ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಶ್ರೀನಿವಾಸ್ ಅವರು ಹೇಳುತ್ತಿದ್ದರು. ಶಾಸಕರು ಎಲ್ಲಿ ಜಾಗ ಹುಡುಕಿಕೊಡುತ್ತಾರೋ ಅಥವಾ ಹಳೇ ಶಾಲೆಯ ಜಾಗವಿದ್ದರೆ ಅದನ್ನು ಕೊಟ್ಟರೆ ಅಲ್ಲೇ ನೂತನ ಶಾಲೆ ನಿರ್ಮಾಣ ಮಾಡಿಕೊಡಲು ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದೇನೆ. ಆಸ್ಪತ್ರೆ ನಿರ್ಮಾಣಕ್ಕೂ ಪಾಲಿಕೆ ವತಿಯಿಂದ ಜಾಗ ಹುಡುಕಲಾಗುತ್ತಿದೆ” ಎಂದು ಭರವಸೆ ನೀಡಿದರು.

“ಸಮಾಜದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಎಲ್ಲಾ ಜಾತಿ, ಧರ್ಮ, ಸಂವಿಧಾನ ರಕ್ಷಣೆ ಮಾಡಿ, ಎಲ್ಲಾ ವರ್ಗದವರಿಗೂ ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಡಬೇಕು. ಇಂದು ನಡೆಯುತ್ತಿರುವ ನೀರಿನ ಕಾಮಗಾರಿ ಯೋಜನೆ ಮೂಲಕ ಎ.ಸಿ ಶ್ರೀನಿವಾಸ್ ಅವರು ಈ ಕ್ಷೇತ್ರದ ಇತಿಹಾಸ ಪುಟಕ್ಕೆ ಸೇರಿದ್ದಾರೆ. ನಿಮ್ಮ ಮನೆಗಳಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ನೀಡಬೇಕು ಎಂದು ಈ ಯೋಜನೆಯನ್ನು ಶ್ರೀನಿವಾಸ್ ಮಾಡಿಸುತ್ತಿದ್ದಾರೆ” ಎಂದರು.

“ಏಕತೆಯಲ್ಲಿ ಶಕ್ತಿ ಇದೆ. ಎಲ್ಲರೂ ಒಂದಾಗಿ ಸೇರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತದೆ. ಆದರೆ ಎಲ್ಲರನ್ನು ವಿಭಜನೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿಮ್ಮ ಸಮಸ್ಯೆಗಳನ್ನು ಶ್ರೀನಿಸಾವ್ ಅವರು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚು ಬಡವರಿದ್ದೀರಿ. ನಿಮ್ಮ ಬದುಕಿನಲ್ಲಿ ನೆರವಾಗಲು ನಮ್ಮ ಸರ್ಕಾರ ಇದೆ” ಎಂದು ತಿಳಿಸಿದರು.

“ಮೊನ್ನೆಯಷ್ಟೇ ಮನೆಮನೆಗೆ ಕಾವೇರಿ, ಸಂಚಾರಿ ಕಾವೇರಿ ಯೋಜನೆ ಮೂಲಕ 650 ರೂಪಾಯಿಗೆ ಟ್ಯಾಕಂರ್ ನೀರು ಪೂರೈಸಲು ಮುಂದಾಗಿದ್ದಾರೆ. ಟ್ಯಾಂಕರ್ ನೀರಿನ ಮಾಫಿಯಾ ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಮೂಲಕ ಮನೆ ಮನೆಗೆ ಶುದ್ಧ ಕಾವೇರಿ ನೀರು ಪೂರೈಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ನಂತರ ಕಾವೇರಿ ಐದನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ನಂತರ ಬೆಂಗಳೂರಿಗೆ ಪೂರೈಸಲು ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ನೀಡಲಾಗಿದೆ. ಆಮೂಲಕ ಮುಂದಿನ 30-40 ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯಲು ನೀರನ್ನು ಪೂರೈಸಬಹುದು” ಎಂದು ತಿಳಿಸಿದರು.

ಇನ್ನು ನೆಲಮಂಗಲ, ಕೋಲಾರ ಭಾಗದ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ. ಇನ್ನು ಸಣ್ಣ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಪಡೆಯಲು ಕೇವಲ 1 ಸಾವಿರ ಮಾತ್ರ ಶುಲ್ಕ ಪಾವತಿ ಮಾಡಬಹುದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನರು ಎ.ಸಿ ಶ್ರೀನಿವಾಸ್ ಅವರ ಬೆನ್ನಿಗೆ ನಿಂತು ನೀವು ನಮಗೆ 136 ಕ್ಷೇತ್ರಗಳಲ್ಲಿ ಗೆಲ್ಲಿಸಿ ಕೊಟ್ಟ ಶಕ್ತಿಕೊಟ್ಟಿದ್ದೀರಿ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಲೆಗಳಿಗೆ ಜಗ್ಗದೇ ಬಗ್ಗದೇ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಕೊಟ್ಟು ಆಶೀರ್ವಾದ ಮಾಡಿದ್ದೀರಿ. ನಿಮ್ಮ ಈ ಋಣ ತೀರಿಸಲು ನಾನಿಲ್ಲಿಗೆ ಬಂದಿದ್ದೇನೆ” ಎಂದರು.

“ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ಕಡುತ್ತಾನೆ. ನಮಗೆ ಅವಕಾಶ ಸಿಕ್ಕಾಗ ಏನು ಮಾಡುತ್ತೇವೆ ಎಂಬುದು ಮುಖ್ಯ. ಶ್ರೀನಿವಾಸ್ ಅವರು ಶಾಸಕರಾದ ಬಳಿಕ, ವಾರಕ್ಕೆ ಮೂರು ಬಾರಿಯಾದರೂ ನನ್ನ ಬಳಿ ಬಂದು ನಿಮ್ಮ ಕ್ಷೇತ್ರದ ಬಗ್ಗೆ ಚರ್ಚೆ ಮಾಡುತ್ತಾರೆ. ಕುಡಿಯುವ ನೀರು, ಚರಂಡಿ, ರಸ್ತೆ ವಿಚಾರವಾಗಿ ಪ್ರಸ್ತಾಪ ಮಾಡುತ್ತಲೇ ಇರುತ್ತದೆ. ನಾವು ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ಮಾತನಾಡುವುದಿಲ್ಲ. ತಮ್ಮ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *