ಶಿವಮೊಗ್ಗ: ಬಂಧಿಸಲು ಹೋದಾಗ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಡ್ರಗ್ಸ್ ಫೆಡ್ಲರ್ ಗೆ ಭದ್ರಾವತಿ ಹಳೇ ನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ನಸ್ರು ಅಲಿಯಾಸ್ ನಸ್ತುಲ್ಲಾ(21)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಂಜಾ ಮಾರಾಟಗಾರನಾದ ನಸ್ರುನನ್ನು ಬಂಧಿಸಲು ಮಂಗಳವಾರ ಬೆಳಿಗ್ಗೆ ಹೋದಾಗ ಘಟನೆ ನಡೆದಿದೆ. ಬಂಧಿಸಲು ಎಂದು ತೆರಳಿದಾಗ ಹಳೇ ನಗರ ಪೊಲೀಸ್ ಠಾಣೆಯ ಪಿಸಿ ಮೌನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಠಾಣೆಯ ಪಿಎಸ್ಐ ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ನಸ್ರುಗೆ ಓಡಿ ಹೋಗದಂತೆ ಹಾಗೂ ಶರಣಾಗುವಂತೆ ಸೂಚಿಸಿದರೂ ಓಡಿ ಹೋಗಲು ಪ್ರಯತ್ನಿಸಿದ್ದು, ಈ ವೇಳೆ, ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆರೋಪಿ ನಸ್ರುವಿನ ಮೇಲೆ ಭದ್ರಾವತಿಯಲ್ಲಿ 5 ಗಾಂಜಾ ಪ್ರಕರಣ ದಾಖಲಾಗಿವೆ. ಬಂಧನದ ವೇಳೆ ಈತನ ಬಳಿ 1.4 ಕೆ.ಜಿ ಗಾಂಜಾ ಪತ್ತೆಯಾಗಿದ್ದು,ಅದನ್ನು ಜಪ್ತಿ ಮಾಡಲಾಗಿದೆ.